ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಸಂಸ್ಥೆ (GSI), ಬೆಂಗಳೂರು ವತಿಯಿಂದ ರಾಷ್ಟ್ರೀಯ ಏರೋ ಜಿಯೋಫಿಸಿಕಲ್ ಮ್ಯಾಪಿಂಗ್ ಕಾರ್ಯಕ್ರಮ (NAGMP) ಅಡಿಯಲ್ಲಿ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ವೈಜ್ಞಾನಿಕ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ಇದರಿಂದಾಗಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಜಿಲ್ಲಾಡಳಿತ ತಿಳಿಸಿದೆ.

NAGMP Block-7 ಯೋಜನೆಯ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಿಶೇಷ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡಿರುವ ವಿಮಾನಗಳು ಕೆಳಹಂತದಲ್ಲಿ ಹಾರಾಟ ನಡೆಸುತ್ತಿದ್ದು. ಈ ಸರ್ವೇ ಕಾರ್ಯದ ಮೂಲಕ ಭೂವೈಜ್ಞಾನಿಕ ಹಾಗೂ ಖನಿಜ ಸಂಪತ್ತಿನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸರ್ವೇ ಮೂಲಕ ಸಂಗ್ರಹವಾಗುವ ಮಾಹಿತಿಯನ್ನು National Geoscience Data Repository (NGDR) ನಲ್ಲಿ ಸಂಗ್ರಹಿಸಿ, ಖನಿಜ ಅನ್ವೇಷಣೆಯಲ್ಲಿ ತೊಡಗಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಹೀಗಾಗಿ, ಜಿಲ್ಲೆಯಾದ್ಯಂತ ಕೆಳಹಂತದ ವಿಮಾನ ಹಾರಾಟ ಕುರಿತು ಸಾರ್ವಜನಿಕರು ಯಾವುದೇ ರೀತಿಯ ಆತಂಕ ಅಥವಾ ಗೊಂದಲಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ/ಕುಮಟಾ ಪುರಸಭೆ ಖುರ್ಚಿ ಕದನ : ವರ್ಗಾವಣೆಗೆ ತಡೆಯಾಜ್ಞೆ.?