ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಮದ ನಿವೃತ್ತ ಎಲ್ಐಸಿ ಏಜೆಂಟ್ ಶಿವಾನಂದ ತಿಮ್ಮಪ್ಪ ಹೆಗಡೆ (69) ಅವರು ಹೊಸ ತಂತ್ರದ ‘ಡಿಜಿಟಲ್ ಅರೆಸ್ಟ್’ ಸೈಬರ್ ಮೋಸದ ಬಲೆಗೆ ಸಿಲುಕಿ ಸುಮಾರು 1.74 ಕೋಟಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಹೆಗಡೆ ಅವರಿಗೆ +91 7502502510 ಸಂಖ್ಯೆಯಿಂದ ಕರೆ ಬಂದಿದ್ದು, ತಮ್ಮನ್ನು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಮಾತನಾಡಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಉಗ್ರಗಾಮಿಗಳು ಮನಿ ಲಾಂಡರಿಂಗ್ಗೆ ಬಳಸುತ್ತಿದ್ದಾರೆ ಎಂದು ಹೇಳಿ, ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ನಕಲಿ ಆರೋಪಗಳನ್ನು ಮಾಡಿದ್ದಾರೆ.
ಪೊಲೀಸರಂತೆ ನಟಿಸಿ ಭೀತಿ ಸೃಷ್ಟಿ
ಈ ಆರೋಪಗಳಿಂದ ಗಾಬರಿಗೊಂಡ ಹೆಗಡೆ ಅವರಿಗೆ, ತನಿಖೆ ನಡೆಯುವವರೆಗೆ ತಮ್ಮ ಖಾತೆಯಲ್ಲಿರುವ ಹಣವನ್ನು ‘ರಿಸರ್ವ್ ಬ್ಯಾಂಕ್’ ಹೆಸರಿನಲ್ಲಿ ನೀಡುವ ಖಾತೆಗೆ ಜಮಾ ಮಾಡಬೇಕೆಂದು ಸೂಚಿಸಲಾಗಿದೆ. ಜೊತೆಗೆ ಪ್ರತಿದಿನ ತಮ್ಮ ಲೈವ್ ಲೊಕೇಶನ್ ಹಂಚಿಕೊಳ್ಳಬೇಕೆಂದು ಹೇಳಲಾಗಿದೆ.ಮೋಸಗಾರರು ತಮ್ಮ ನಂಬಿಕೆಗಳಿಸಲು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ್ದು, ತಾವು ಮುಂಬೈನ ಹಿರಿಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳಿದರೆ ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿ, ಹೆಗಡೆ ಅವರನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದಾರೆ.
ಹಂತ ಹಂತವಾಗಿ ಹಣ ವರ್ಗಾವಣೆ
ಇದರಿಂದಾಗಿ ಭಯಭೀತರಾಸ ಹೆಗಡೆ ಅವರು , ಮೋಸಗಾರರ ಸೂಚನೆಯಂತೆ ಹಂತ ಹಂತವಾಗಿ ಒಟ್ಟು 1,74,50,000 ಹಣವನ್ನು ವಿವಿಧ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಮೋಸ ಅರಿತ ಬಳಿಕ ದೂರು
ನಂತರ ಇದು ಮೋಸವೆಂದು ತಿಳಿದ ಹೆಗಡೆ, ತಕ್ಷಣ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ/“ರೈತರ ಹೆಸರಿನಲ್ಲಿ ನಕಲಿ ಸಾಲ– 1.88 ಕೋಟಿ ಅವ್ಯವಹಾರ ? ಕಾಳಂಗಿ ಸೊಸೈಟಿ ವಿರುದ್ಧ ಭಾರಿ ಆರೋಪ

