ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತಾಲೂಕಿನ ದಾಸನಕೊಪ್ಪದ ಕಾಳಂಗಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಸೃಷ್ಠಿಸಿ ಹಣ ದುರುಪಯೋಗ ಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿಬರುತ್ತಿದೆ.
ಕಳೆದೆರಡು ಮೂರು ದಿನಗಳಿಂದ ಈ ಸೊಸೈಟಿಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಸಂಘದಲ್ಲಿ ರೈತರ ಗಮನಕ್ಕೆ ಬಾರದಂತೆ ಅವರ ಹೆಸರಿನಲ್ಲಿ ಸಾಲ ಪಡೆದು ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಅಂದಾಜು 1.88 ಕೋಟಿ ರೂ ಗಳಷ್ಟು ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಕಾಳಂಗಿ ಮತ್ತೊಂದು ಹೀಪನಹಳ್ಳಿ ಹಾಗೂ ಗೋಳಿ ಸಹಕಾರಿ ಸಂಘವಾಗಲಿದೆಯೇ ಎಂಬ ಆಕ್ರೋಶ ವ್ಯಕ್ತವಾಗಿದೆ.
‘ಈಗಾಗಲೇ ಸುಮಂತ ಧನಂಜಯ ಸಾಕಣ್ಣನವರ ಹಾಗೂ ನಂಜುಂಡಿ ಸಾಕಣ್ಣನವರ ಎಂಬ ರೈತರ ಹೆಸರಿನಲ್ಲಿ ಸಾಲ ಮಾಡಲಾಗಿದ್ದು, ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತು ಮಾರ್ಚ್ 3 ಮತ್ತು ಮಾರ್ಚ್ 13ರಂದು ಹಣವನ್ನು ಮರು ಜಮಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಸೊಸೈಟಿಯ ಹಣವನ್ನು ಹಾನಗಲ್ ಮೂಲದ ವ್ಯಕ್ತಿಯೊಬ್ಬನಿಗೆ ಬಡ್ಡಿ ವ್ಯವಹಾರ ನಡೆಸಲು ಸುಮಾರು 69 ಲಕ್ಷ ರೂಪಾಯಿಗಳನ್ನು ಆರ್ಟಿಜಿಎಸ್ ಮೂಲಕ ನೀಡಲಾಗಿದೆ ಎನ್ನಲಾಗಿದೆ.
ರೈತರು ಇಟ್ಟಿರುವ ಠೇವಣಿ ಹಣವನ್ನು ವಾಪಸ್ ನೀಡಲು ಸಂಘದಲ್ಲಿ ಹಣವಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಂಘದಲ್ಲಿ ಐದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದ ರೈತರೊಬ್ಬರು, ತುರ್ತು ಕಾರ್ಯಕ್ಕಾಗಿ ತಮ್ಮ ಠೇವಣಿ ಹಣವನ್ನು ಪಡೆಯಲು ಕಳೆದ ಎಂಟು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಸಂಘದಲ್ಲಿ ಹಣದ ಕೊರತೆ ಇರುವುದರಿಂದ ಠೇವಣಿ ಮೊತ್ತವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂಬ ಉತ್ತರ ಸಿಕ್ಕಿದೆ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ಹಣದ ಬದಲು ಕೇವಲ 20-25 ಸಾವಿರ ರೂಪಾಯಿ ಮಾತ್ರ ನೀಡಲು ಸಾಧ್ಯ ಎಂದು ಸಂಘದ ಸಿಬ್ಬಂದಿ ಹೇಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಂಘದಲ್ಲಿ ನಕಲಿ ಸಾಲ ಸೃಷ್ಟಿಸಿದ ಅಕ್ರಮಗಳ ಪರಿಣಾಮವಾಗಿ ಈಗ ಸಾಮಾನ್ಯ ರೈತರು ಕೂಡಿಟ್ಟ ಠೇವಣಿ ಹಣವನ್ನೂ ನೀಡಲಾಗದ ಸ್ಥಿತಿಗೆ ಸಂಘ ತಲುಪಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.
‘ತಮ್ಮ ಬೆವರಿನ ಹನಿಯಂತಿರುವ ಹಣವನ್ನು ನಂಬಿಕೆಯಿಂದ ಸಹಕಾರಿ ಸದಸ್ಯರು ಈಗ ಕಂಗಾಲಾಗಿದ್ದಾರೆ. ಸೊಸೈಟಿಯ ವ್ಯವಹಾರ ಬೆಳಕಿಗೆ ಬಂದಿರುವ ಬಗ್ಗೆ ಸಹಕಾರಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಳಂಗಿ ಸೊಸೈಟಿ ನಂಬಿ ಮೋಸ ಹೋದ ರೈತರು ಇಲಾಖೆಯ ಉನ್ನತಿಧಿಕಾರಿಗಳು ಮಧ್ಯ ಪ್ರವೇಶಿಸಿ, ಸಮಗ್ರ ತನಿಖೆ ನಡೆಸಿ ರೈತರ ಹಣಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

