ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತಾಲೂಕಿನ ಬಿಳೂರು ಗ್ರಾಮದಲ್ಲಿ ಆಯೋಜನೆ‌ ಮಾಡಿದ ಕೆರೆ ಬೇಟೆಯಲ್ಲಿ, ಸಾವಿರಾರು ಜನರ ಉತ್ಸಾಹದಿಂದ ಭಾಗವಹಿಸಿದ್ದು,.ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಈ ವಿಶಿಷ್ಟ ಕಾರ್ಯಕ್ರಮ ಗಮನಸೆಳೆಯಿತು.

ಗ್ರಾಮದ ಶ್ರೀಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಕೆರೆ ಬೇಟೆಯನ್ನು ಆಯೋಜಿಸಲಾಗಿತ್ತು.ವಿವಿಧ ಊರುಗಳಿಂದ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಕೆರೆಯಲ್ಲಿ ಮೀನು ಹಿಡಿಯುವ ಸಂಭ್ರಮದಲ್ಲಿ ತೊಡಗಿದರು.ಮೀನು ಹಿಡಿಯಲು ಬಂದ ಪ್ರತಿಯೊಬ್ಬರಿಗೂ 800 ಶುಲ್ಕ ವಿಧಿಸಲಾಗಿದ್ದು, ಸಂಗ್ರಹವಾದ ಮೊತ್ತವನ್ನು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆದರಿನ ಬುಟ್ಟಿಗಳನ್ನು ಬಳಸಿ ಮೀನು ಹಿಡಿಯಲು ಅವಕಾಶ ನೀಡಲಾಗಿತ್ತು. ಆದರೆ ಬಲೆ ಬಳಸಿ ಮೀನು ಹಿಡಿಯುವುದಕ್ಕೆ ಅವಕಾಶ ಇರಲಿಲ್ಲ. ಇದರಿಂದ ಕಾರ್ಯಕ್ರಮಕ್ಕೆ ವಿಶಿಷ್ಟ ಸಾಂಪ್ರದಾಯಿಕ ಸ್ಪರ್ಶ ಸಿಕ್ಕಂತಾಗಿದೆ.ಕೆರೆ ಬೇಟೆಯಲ್ಲಿ ಕೆಲವರಿಗೆ ಭರ್ಜರಿ ಮೀನು ಸಿಕ್ಕ ಖುಷಿ ಕಂಡುಬಂದರೆ, ಇನ್ನೂ ಕೆಲವರು ಮೀನು ಸಿಗದೇ ನಿರಾಸೆಯಿಂದ ಹೋಗಬೇಕಾಯಿತು. ಒಟ್ಟಾರೆ ಗ್ರಾಮೀಣ ಸೊಗಡಿನಲ್ಲಿ ನಡೆದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವಂತೆ ಮಾಡಿತು.

ಇದನ್ನೂ ಓದಿ/ಮಾರ್ಚ್ 25 ರಿಂದ ‘ಪಡ್ತಿ ಪ್ರೀಮಿಯರ್ ಲೀಗ್ ಸೀಸನ್ 3’ ಕ್ರಿಕೆಟ್ ಟೂರ್ನಿ; 10 ತಂಡಗಳು ಭಾಗಿ