ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಎರಡು ವರ್ಷದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಸಂಭವಿಸಿದ್ದು, ಸ್ಥಳೀಯ ಯುವಕನ ಧೈರ್ಯ ಮತ್ತು ತ್ವರಿತ ಕಾರ್ಯಾಚರಣೆಯಿಂದ ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ನಗರದ ಕಸ್ತೂರಬಾ ನಗರದಲ್ಲಿ ವಾಸವಾಗಿರುವ ಎರಡು ವರ್ಷದ ಬಾಲಕಿ ಭುವಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮನೆಯ ಸಮೀಪದ ಬಾವಿಗೆ ಬಿದ್ದಿದ್ದಳು. ಮಗು ಬಾವಿಗೆ ಬಿದ್ದ ಬಳಿಕ ಅಳುವ ಶಬ್ದ ಕೇಳಿದ ಪಾಲಕರು ತಕ್ಷಣ ಬಾವಿಯ ಬಳಿ ನೋಡಿದಾಗ, ಮಗು ಬಾವಿಯೊಳಗಿನ ಪಂಪ್ ಲೈನ್ ಅನ್ನು ಹಿಡಿದುಕೊಂಡು ಅಳುತ್ತಿರುವುದು ಗಮನಕ್ಕೆ ಬಂದಿದೆ.
ಈ ವೇಳೆ ಸ್ಥಳೀಯ ನಿವಾಸಿ ಪಯಾಜ್ ಚೌಟಿ ಘಟನೆ ತೀವ್ರತೆಯನ್ನು ಅರಿತು ತಕ್ಷಣ ಬಾವಿಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ. ಅವರ ಧೈರ್ಯ ಮತ್ತು ಸಮಯೋಚಿತ ಕಾರ್ಯಾಚರಣೆಯಿಂದ ಬಾಲಕಿ ಸುರಕ್ಷಿತವಾಗಿ ಮೇಲಕ್ಕೆ ತರಲಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಪಯಾಜ್ ಚೌಟಿ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.

