ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಮಹಿಳೆಯರು ಕುಟುಂಬದ ಹಾಗೂ ಸಮಾಜದ ಬೆನ್ನೆಲುಬು. ಒಂದು ಮಹಿಳೆ ಶಿಕ್ಷಣ ಹೊಂದಿ, ವಿವಿಧ ಕೌಶಲ್ಯಗಳನ್ನು ಕಲಿತು ಆತ್ಮವಿಶ್ವಾಸದಿಂದ ಮುಂದೆ ಬಂದಾಗ ಆಕೆಯ ಕುಟುಂಬ ಮಾತ್ರವಲ್ಲದೆ ಸಂಪೂರ್ಣ ಸಮಾಜವೇ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹೇಳಿದರು.

ಯಲ್ಲಾಪುರ ತಾಲೂಕಿನ ಉದ್ಯಮ ನಗರದಲ್ಲಿರುವ ಕರುಣಾ ತರಬೇತಿ ಕೇಂದ್ರದಲ್ಲಿ ಅರುಣೋದಯ ಟ್ರಸ್ಟ್ ಮತ್ತು ಕರುಣಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ಇಂದಿನ ಕಾಲದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವವಿದೆ. ಹೊಲಿಗೆ, ಕೈಗಾರಿಕೆ, ಉದ್ಯಮಶೀಲತೆ ಸೇರಿದಂತೆ ಯಾವುದೇ ಕೌಶಲ್ಯ ಕಲಿತರೂ ಅದು ಮಹಿಳೆಯರಿಗೆ ಸ್ವಂತ ಆದಾಯ ಸಂಪಾದಿಸಲು ಹಾಗೂ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯಕವಾಗುತ್ತದೆ.ಆರ್ಥಿಕ ಸ್ವಾವಲಂಬನೆ ಮಹಿಳೆಯರಿಗೆ ಗೌರವ ಹಾಗೂ ಆತ್ಮಸಮ್ಮಾನವನ್ನು ನೀಡುತ್ತದೆ ಎಂದು ಹೇಳಿದರು.

ಈ ತರಬೇತಿಯಲ್ಲಿ ಭಾಗವಹಿಸಿರುವ ಮಹಿಳೆಯರು ಪಡೆದಿರುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಇಲ್ಲಿ ಕಲಿತ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರು ಶಕ್ತಿಶಾಲಿಯಾಗಿ, ಆತ್ಮವಿಶ್ವಾಸದಿಂದ ಬದುಕಿ ಸಮಾಜದಲ್ಲಿ ಗೌರವದ ಸ್ಥಾನ ಪಡೆಯುವಂತಹ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರುಣೋದಯ ಟ್ರಸ್ಟ್ (ರಿ) ಸಂಸ್ಥಾಪಕರಾದ ಸತೀಶ ಪಿ. ನಾಯ್ಕ ಮಾತನಾಡಿ,ತರಬೇತಿ ಪಡೆದ ಮಹಿಳೆಯರು ಹೊಸ ವೃತ್ತಿ ಆರಂಭಿಸಲು ನಮ್ಮ ಸಂಸ್ಥೆ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧವಾಗಿದೆ.ತರಬೇತಿಯ ಲಾಭ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಲ್ಲಾಸ ಶಾನಭಾಗ್, ಬೆನಿತ್ ಸಿದ್ದಿ, ಲಾರೆನ್ಸ್ ಸಿದ್ದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ/Accident/ಭೀಕರ ರಸ್ತೆ ಅಪಘಾತ: ಓರ್ವ ಸ್ಪಾಟ್ ಔಟ್, ಇನ್ನೋರ್ವ ಗಂಭೀರ