ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾರ್ಯಕರ್ತರಿಗೆ ಯೋಗ್ಯತೆ ಬೇಕು ಎನ್ನುವ ಕುರಿತು ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ ಸೈಲ್ ನೀಡಿದ ಹೇಳಿಕೆ ಪಕ್ಷಕ್ಕಾಗಿ ಹಲಿರುಳು ದುಡಿದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಶಾಸಕರು ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಶಾಸಕ ಸತೀಶ ಸೈಲ್ ಅವರು “ಕಾರ್ಯಕರ್ತರಿಗೆ ಯೋಗ್ಯತೆ ಇಲ್ಲ” ಎಂಬರ್ಥದ ಹೇಳಿಕೆ ನೀಡಿದಂತೆ ಕಂಡುಬರುತ್ತಿದೆ. ಈ ಮಾತು ಹಲವು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರ ಮನಸ್ಸಿಗೆ ಭಾರೀ ನೋವುಂಟುಮಾಡಿದಂತಾಗಿದೆ. ಪಕ್ಷಕ್ಕಾಗಿ ದುಡಿಯುತ್ತಾ ಶಾಸಕರನ್ನಾಗಿ ಆಯ್ಕೆ ಮಾಡಲು ಶ್ರಮಿಸಿದ ಕಾರ್ಯಕರ್ತರನ್ನೇ ಈ ರೀತಿಯಾಗಿ ಟೀಕಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾರ್ಯಕರ್ತರ ನಡುವೆ ಕೇಳಿಬರುತ್ತಿದೆ.

“ಒಂದೊಮ್ಮೆ ಕಾರ್ಯಕರ್ತರು ಇವರ ಪರವಾಗಿ ದುಡಿಯದೆ ಇದ್ದರೆ ಇವರು ಹೇಗೆ ಶಾಸಕರಾಗಿ ಆಯ್ಕೆಯಾಗುತ್ತಿದ್ದರು?” ಎಂಬ ಮಾತು ಸಾಮಾನ್ಯ ಕಾರ್ಯಕರ್ತರ ಮಧ್ಯೆಯೇ ಕೇಳಿಬರುತ್ತಿದೆ. ಶಾಸಕರ ಈ ಹೇಳಿಕೆ ಇದೀಗ ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಯೋಗ್ಯತೆ ಇಲ್ಲದ ಕಾರ್ಯಕರ್ತರೇ ಇದ್ದರೆ, ಅದೇ ಕಾರ್ಯಕರ್ತರು ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಹೇಗೆ?” ಎಂದು ಸ್ವಪಕ್ಷದವರ ಜೊತೆಗೆ ವಿರೋಧ ಪಕ್ಷದ ನಾಯಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ.

ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಬಲಪಡಿಸುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕರ ಈ ಮಾತು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಸಕರ ಈ ಹೇಳಿಕೆಯಿಂದ ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಮುಜುಗರದ ವಾತಾವರಣ ನಿರ್ಮಾಣವಾಗಿದ್ದು, ಪಕ್ಷದೊಳಗೆ ಅನಗತ್ಯ ಗೊಂದಲ ಸೃಷ್ಟಿ ಆಗಲು  ಕಾರಣವಾಗಿದೆ. “ದೋಣಿ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ” ಎನ್ನುವಂತಾಗಿದೆ ಶಾಸಕರ‌ ಮಾತು.

ಈ ಹೇಳಿಕೆ ವಿರೋಧ ಪಕ್ಷದ ನಾಯಕರಿಗೆ ಅಸ್ತ್ರವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಹಂಗಿಸುವ ಕೆಲಸವೂ ನಡೆಯುತ್ತಿದೆ ಎನ್ನಲಾಗಿದೆ. “ಯೋಗ್ಯತೆ ಇಲ್ಲದ ಪಕ್ಷದಲ್ಲಿ ಇನ್ನೂ ಯಾಕೆ ಕೆಲಸ ಮಾಡುತ್ತಿದ್ದೀರಾ?” ಎಂದು ಪ್ರಶ್ನೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಕಾರ್ಯಕರ್ತರ ಯೋಗ್ಯತೆ ಕುರಿತು ಶಾಸಕರು ಮಾಡಿದ ಈ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಇರಿಸುಮುರಿಸು ಉಂಟುಮಾಡಿರುವುದು ಮಾತ್ರ ಸತ್ಯ

ಇದನ್ನೂ ಓದಿ/ಕಂಟೆನರ್ ಕಾರಿನ ಮೇಲೆ ಪಲ್ಟಿ: 8 ವರ್ಷದ ಬಾಲಕ ದುರ್ಮರಣ, ಮೂವರಿಗೆ ಗಂಭೀರ ಗಾಯ