ಸುದ್ದಿಬಿಂದು ಬ್ಯೂರೋ ವರದಿ
Karwar/ಕಾರವಾರ : ಗ್ರಹಣದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ದರ್ಶನ ಮತ್ತು ಪೂಜಾ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಭಕ್ತರು ದೇವಾಲಯಗಳಿಗೆ ಭೇಟಿ ನೀಡುವ ಮೊದಲು ಸಮಯದ ಮಾಹಿತಿಯನ್ನು ಗಮನಿಸುವಂತೆ ದೇವಾಲಯ ಆಡಳಿತ ಮಂಡಳಿಗಳು ಮನವಿ ಮಾಡಿವೆ.

ಗೋಕರ್ಣ ಮಹಾಬಲೇಶ್ವರ ದೇವಾಲಯ
ಮುಂಜಾನೆ 6ರಿಂದ 11.30ರವರೆಗೆ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸಂಜೆ 5ರಿಂದ 7ರವರೆಗೆ ದರ್ಶನ ಇರಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ ಇರುವುದಿಲ್ಲ. ರಾತ್ರಿ ಗ್ರಹಣ ಮೋಕ್ಷದ ನಂತರ ಶುದ್ಧೀಕರಣ ಕಾರ್ಯಗಳ ಬಳಿಕ ಮಹಾಪೂಜೆ ನಡೆಯಲಿದೆ.

ಮುರುಡೇಶ್ವರ ದೇವಸ್ಥಾನ
ಬೆಳಗ್ಗೆ 8.30ರೊಳಗೆ ಪೂಜೆ ಪೂರ್ಣಗೊಳ್ಳಲಿದೆ. ಮಧ್ಯಾಹ್ನ 1ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ. ಗ್ರಹಣ ಸಮಯ ವಿಶೇಷ ಆರತಿ ನಡೆಯಲಿದ್ದು, ರಾತ್ರಿ ಶುದ್ಧೀಕರಣದ ಬಳಿಕ ಮಹಾಪೂಜೆ ನೆರವೇರಲಿದೆ.

ಇಡಗುಂಜಿ ವಿನಾಯಕ ದೇವಸ್ಥಾನ
ಬೆಳಗ್ಗೆ 9.15ರೊಳಗೆ ಪೂಜೆ ಪೂರ್ಣಗೊಳ್ಳಲಿದೆ. ಮಧ್ಯಾಹ್ನ 2ರಿಂದ 4ರವರೆಗೆ ದೇವಾಲಯ ಬಂದ್ ಇರಲಿದೆ. ಗ್ರಹಣದ ದಿನ ಯಾವುದೇ ಸೇವೆಗಳು ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಗ್ರಹಣ ಮೋಕ್ಷದ ನಂತರ ಶುದ್ಧೀಕರಣ ಕಾರ್ಯಗಳ ಬಳಿಕ ಮಹಾಪೂಜೆ ನಡೆಯಲಿದೆ.

ಶಿರಸಿ ಶ್ರೀಮಾರಿಕಾಂಬಾ ದೇವಾಲಯ
ಜಾತ್ರೆಯ ಹಿನ್ನಲೆಯಲ್ಲಿ ಮುಂಜಾನೆ 5ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಭಕ್ತರಿಗೆ ವಿವಿಧ ಸೇವೆಗಳು ಲಭ್ಯವಿರಲಿವೆ. ಸಂಜೆ 4.35ರಿಂದ ಸಂಜೆ 7.50ರವರೆಗೆ ಸೇವೆ ಹಾಗೂ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಧ್ಯಾಹ್ನ ಪ್ರಸಾದ ಸೇವೆಯೂ ಇರುವುದಿಲ್ಲ.

ಇದನ್ನೂ ಓದಿ/ ನಾಳೆ ಆಕಾಶದಲ್ಲಿ ಬ್ಲಡ್ ಮೂನ್ ಅದ್ಭುತ : ಕೆಂಪು ಚಂದ್ರನ ಅಪರೂಪದ ನೋಟಕ್ಕೆ ಕ್ಷಣಗಣನೆ