ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಪಟ್ಟಣದ ಹೃದಯಭಾಗದಲ್ಲಿದ್ದ ‘ಸಂಶುದ್ದೀನ್ ಸರ್ಕಲ್’ನಲ್ಲಿನ ಪ್ಯೂರ್ ಗೋಲ್ಡ್ ಗಡಿಯಾರದ ಗೋಪುರ ಇತಿಹಾಸದ ಪುಟಗಳಿಗೆ ಸೇರಿತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಸುಮಾರು 24 ವರ್ಷಗಳಿಂದ ಭಟ್ಕಳದ ಹೆಗ್ಗುರುತಾಗಿದ್ದ ಈ ಗೋಪುರವನ್ನು ಬುಧವಾರ ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಲಾಯಿತು. ಸಂಶುದ್ದೀನ್ ಸರ್ಕಲ್ ಇನ್ನೂ ನೆನಪು ಮಾತ್ರ

2002ರಲ್ಲಿ ಪ್ಯೂರ್ ಗೋಲ್ಡ್ ಮಳಿಗೆ ಮಾಲೀಕ ಶಬೀಬ್ ಕೋಲಾ ಅವರು ಸುಮಾರು ₹8–10 ಲಕ್ಷ ವೆಚ್ಚದಲ್ಲಿ ಗೋಪುರವನ್ನು ನಿರ್ಮಿಸಿದ್ದರು. ದುಬೈನಲ್ಲಿ ಕಂಡ ಗಡಿಯಾರದ ಗೋಪುರದ ವಿನ್ಯಾಸದಿಂದ ಪ್ರೇರಿತವಾಗಿ ನಿರ್ಮಿತವಾಗಿದ್ದ ಈ ರಚನೆ, ನಾಲ್ಕು ದಿಕ್ಕುಗಳಲ್ಲಿ ಗಡಿಯಾರ, ಮಧ್ಯಭಾಗದಲ್ಲಿ ಚಿನ್ನದ ಬಣ್ಣದ ಬಳೆ ಮಾದರಿ ಹಾಗೂ ತುದಿಯಲ್ಲಿ ಸುಮಾರು 2 ಟನ್ ತೂಕದ ಗ್ರಾನೈಟ್ ಬಾಲ್ ಹೊಂದಿದ್ದು ಆಕರ್ಷಕವಾಗಿ ಕಂಗೊಳಿಸುತ್ತಿತ್ತು.
ಒಂದು ಕಾಲದಲ್ಲಿ “ಭಟ್ಕಳ ಎಂದರೆ ಈ ಗೋಪುರವೇ” ಎನ್ನುವಷ್ಟು ಪ್ರಸಿದ್ಧಿಯಾಗಿದ್ದ ಇದು ಪ್ರವಾಸಿಗರಿಗೆ ಸೆಲ್ಫಿ ಪಾಯಿಂಟ್ ಆಗಿಯೂ ಖ್ಯಾತಿ ಪಡೆದಿತ್ತು.

ವಿವಿಧ ರಾಜಕೀಯ ಪ್ರತಿಭಟನೆಗಳು, ಜಾಗೃತಿ ಜಾಥಾಗಳು, ವಿಜಯೋತ್ಸವಗಳು ಸೇರಿದಂತೆ ಸಾವಿರಾರು ಕಾರ್ಯಕ್ರಮಗಳಿಗೆ ಈ ವೃತ್ತ ಸಾಕ್ಷಿಯಾಗಿತ್ತು. ಗೋಪುರ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ವೃತ್ತದತ್ತ ಧಾವಿಸಿದರು. ಹಲವರು ಮೊಬೈಲ್ ಫೋನ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ನೆನಪಾಗಿ ಉಳಿಸಿಕೊಂಡರು. ಕಾರ್ಯಾಚರಣೆಯ ವೇಳೆ ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ನಿರ್ವಹಣೆ ಕೊರತೆಯಿಂದ ಕುಂದಿದ ಹೊಳಪು
ಆರಂಭದಲ್ಲಿ ಗೋಪುರದ ಗಡಿಯಾರ ಕಾರ್ಯನಿರ್ವಹಿಸುತ್ತಿದ್ದರೂ, ನಂತರ ದುರಸ್ತಿ ಕೊರತೆಯಿಂದ ನಿಂತುಹೋಯಿತು. ಸಮರ್ಪಕ ನಿರ್ವಹಣೆ ಇಲ್ಲದೆ ಗೋಪುರದ ಹೊಳಪು ಕ್ರಮೇಣ ಕುಂದಿತ್ತು. ಆದರೂ ಪಟ್ಟಣದ ಗುರುತಾಗಿ ಉಳಿದಿದ್ದ ಈ ರಚನೆ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜಾಗ ಬಿಡಬೇಕಾಯಿತು.

ಬಂದೋಬಸ್ತ್ ನಡುವೆ ಕಾರ್ಯಾಚರಣೆ
ಈ ವೃತ್ತದಲ್ಲಿ ಹಬ್ಬಗಳು, ವಿವಿಧ ಕಾರ್ಯಕ್ರಮಗಳು ಹಾಗೂ ಬಂಟಿಂಗ್‌ಗಳ ವಿಚಾರದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಪೊಲೀಸರಿಗೆ ತಲೆನೋವಾಗಿತ್ತು. ಚತುಷ್ಪಥ ಹೆದ್ದಾರಿಯಾಗಿ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೃತ್ತ ತೆರವುಗೊಂಡಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ವೃತ್ತದ ನೆಲಸಮಗೊಳಿಸುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ದಿವಾಕರ ಪಿ.ಎಂ. ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಡುವೆ ಕಾರ್ಯಾಚರಣೆ ಪೂರ್ಣಗೊಂಡಿತು. 24 ವರ್ಷದ ನೆನಪುಗಳಿಗೆ ಸಾಕ್ಷಿಯಾದ ಗೋಪುರ ಇಂದು ನೆಲಸಮವಾಗಿದ್ದು ಭಟ್ಕಳ ವೃತ್ತದಲ್ಲಿ ಉಳಿದಿರುವುದು ನೆನಪು ಮಾತ್ರ.

ಇದನ್ನೂ ಓದಿ/ಯಲ್ಲಾಪುರ ಯುಗಾದಿ ಉತ್ಸವಕ್ಕೆ ನೂತನ ಸಾರಥಿ: ವಿಶಾಲ ವಿಜಯ ವಾಳಂಬಿ ಅಧ್ಯಕ್ಷರಾಗಿ ಆಯ್ಕೆ