ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ತಾಲೂಕಿನ ಅವರಗುಪ್ಪಾದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲೇ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಹಾಗೂ ಪ್ರಖ್ಯಾತ ಜ್ಯೋತಿಷಿ ಸೇರಿ ಏಳು ಮಂದಿ ಆರೋಪಿಗಳನ್ನು ಫೆಬ್ರವರಿ 11ರ ತನಕ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ/ಮಟ್ಕಾ ಸಂಘಕ್ಕೆ ಭರ್ಜರಿ ಆದಾಯ : ಮೊದಲ ದಿನವೇ ಯಶಸ್ವಿ ಕಂಡ ‘ಮಂಜ,ದಾಸರ ತಂಡ’

ಪ್ರಮುಖ ಆರೋಪಿಗಳಾಗಿರುವ ಕಮಲಾಕರ ಭಟ್, ಸುಚಿತ್ರಾ, ಲೋಕನಾಥ, ಆಕಾಶ, ಶಿವಮೊಗ್ಗ ನಗರದ ಮಹ್ಮದ್ ಫೈಫೂಜ್, ಫೈಸಲ್ ಹಾಗೂ ಇಫಾರ್ನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರ ಪತ್ನಿ, ಇಬ್ಬರು ಮಕ್ಕಳ ತಾಯಿಯಾದ ಸುಚಿತ್ರಾ, ಪ್ರಖ್ಯಾತ ಜ್ಯೋತಿಷಿ ಎಂದು ಕರೆಸಿಕೊಳ್ಳುತ್ತಿದ್ದ ಕಮಲಾಕರ ಭಟ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಸುಚಿತ್ರಾಳ ಮಗಳಿಗೆ ತಿಳಿದ ಬಳಿಕ, ತಾಯಿ ಮಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದುದಾಗಿ ಮಗಳು ತನ್ನ ತಂದೆ ಮಹೇಶ್ ನಾಯ್ಕ್ ಅವರಿಗೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹೇಶ್ ನಾಯ್ಕ್ ಅವರು ತಮ್ಮ ಪತ್ನಿ ಸುಚಿತ್ರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ವಿಚಾರ ತಿಳಿದ ಸುಚಿತ್ರಾ ಟೀಂ ಜ್ಯೋತಿಷಿ ಕಮಲಾಕರ ಭಟ್ ಸೇರಿ ಏಳು ಮಂದಿ ಮಹೇಶ್ ನಾಯ್ಕ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಮಹೇಶ್ ನಾಯ್ಕ್ ಅವರಿಗೆ ಇರಿಯ ಬೇಕಾದ ಚೂರಿ ತಪ್ಪಿ, ಅವರ ಸಹೋದರ ವಸಂತ ನಾಯ್ಕ್ ಅವರಿಗೆ ತಗುಲಿ ಮೃತಪಟ್ಟಿದ್ದಾರೆ.

ಘಟನೆಯ ಕೆಲವೇ ಗಂಟೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಏಳು ಆರೋಪಿಗಳಿಗೆ ಎಂಟು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಜ್ಯಮಟ್ಟದ ಕೆಲ ಸುದ್ದಿ ವಾಹಿನಿಗಳಲ್ಲಿ ಕುಳಿತು ಭವಿಷ್ಯ ಹೇಳುತ್ತಿದ್ದ ಕಮಲಾಕರ ಭಟ್ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಾ ತನ್ನ ಭವಿಷ್ಯವನ್ನ ತಾನೆ ನೋಡಿಕೊಳ್ಳುವಂತಾಗಿದೆ..

ಇದನ್ನೂ ಓದಿ/ಕಾಡು ಪ್ರಾಣಿಯನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ : ವಿಜಯ ಕರ್ನಾಟಕ ಪತ್ರಿಕೆಯ ಬಸಯ್ಯ ಗಂಭೀರ