ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಪಟ್ಟಣದಲ್ಲಿ ನಿನ್ನೆಯಿಂದ‌ “ಮಂಜದಾಸರ” ತಂಡದ ವತಿಯಿಂದ ಮಟ್ಕಾ ಸಂಘ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ 5ಲಕ್ಷಕ್ಕೂ ಅಧಿಕ ಆದಾಯ ಲಭಿಸಿದೆ ಎನ್ನಲಾಗಿದೆ.

ಪಟ್ಟಣದಲ್ಲಿ “ಮಂಜದಾಸರ” ಮಟ್ಕಾ ಸಂಘ ಆರಂಭವಾದ ಬಳಿಕ ಪಟ್ಟಣದಲ್ಲಿರುವ ನೂರಾರು ಸಣ್ಣ–ಪುಟ್ಟ ಅಂಗಡಿಕಾರರಿಂದ ಮಟ್ಕಾ ಸಂಘದ ಅಭಿವೃದ್ಧಿ ಹೆಸರಿನಲ್ಲಿ ವಿವಿಧ ಆಟಗಳ ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮೊತ್ತದ ಹಣ ಸಂಗ್ರಹವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂಗಡಿಕಾರರಿಂದ ಸಂಗ್ರಹವಾದ ಹಣವನ್ನು ಮಂಜದಾಸರು” ರಾಜ–ರಾಣಿ ಮಾರ್ನಿಂಗ್, ಶ್ರೀದೇವಿ, ಕಲ್ಯಾಣಿ, ಮಹಾರಾಣಿ ಮೊದಲಾದ ಮುಖ್ಯಸ್ಥರಿಗೆ ಕಳುಹಿಸದೇ, ಸಂಪೂರ್ಣ ಹಣವನ್ನು ಮಂಜಾ-ದಾಸರೆ ಇಟ್ಟುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಮಟ್ಕಾ ಸಂಘದ ಅಭಿವೃದ್ಧಿಗೆ ಬಂದ ಹಣದಲ್ಲಿ ಸಂಘ ನಡೆಸಲು ಅನುಮತಿ ನೀಡಿದ ಅಂಕೋಲಾದ “ಮಠಾಧೀಶರಿಗೆ” ಪ್ರಸಾದ ರೂಪದಲ್ಲಿ ನೀಡಿ, ಯಾವುದೇ ಭಯವಿಲ್ಲದೆ ಸಂಘವನ್ನು ನಡೆಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. “ಮಠ”ದ ಆಶೀರ್ವಾದದಿಂದ “ಕಾಡಿನ ರಾಜ”, “ವೃಕ್ಷಪ್ರೇಮಿ” ಎಂದೇ ಪರಿಚಿತನಾದ ಮಂಜದಾಸರು ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಸಂಘದ ಸದಸ್ಯರಾಗಿರುವ ಕೆಲ ಅಂಗಡಿಕಾರರು ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರನ್ನು ತಮ್ಮ ಬಳಿ ಕರೆದು, ಕಡಿಮೆ ಹಣ ಹೂಡಿಕೆ ಮಾಡಿದರೆ (ಒಂದು ರೂಪಾಯಿಗೆ 80 ರೂಪಾಯಿ) ಹೆಚ್ಚಿನ ಲಾಭ ಸಿಗುತ್ತದೆ ಎಂದು ಆಮಿಷ ಒಡ್ಡಿ, ಕೆಲವು ಸಂಖ್ಯೆಗಳ (ನಂಬರ್) ಮೇಲೆ ಹಣ ಕಟ್ಟಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಪಟ್ಟಣದಲ್ಲಿ ಇರುವ ಸಣ್ಣಪುಟ್ಟ ಗೂಡಂಗಡಿ ವ್ಯಾಪಾರಿಗಳು ಮಟ್ಕಾ ಸಂಘಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಅಂಗಡಿಗಳನ್ನು ತೆರೆಯುತ್ತಾರೆ ಎನ್ನುವ ಮಾತುಗಳೂ ಪಟ್ಟಣದಲ್ಲಿ ಕೇಳಿ ಬರುತ್ತಿವೆ. ಆದರೆ ಏನೇ ಇರಲಿ, ಮಟ್ಕಾ ಸಂಘ ಆರಂಭವಾದ ಮೊದಲ ದಿನವೇ ಭರ್ಜರಿ ಲಾಭ ಕಂಡಿದೆ. ಇದರಿಂದ ಅಂಕೋಲಾದ “ಮಠಾಧೀಶರಿಗೆ” ಸಹ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿದೆ, ಅವರು ಮೌನವಾಗಿ ಮಠದಲ್ಲೇ ಕುಳಿತುಕೊಂಡರೆ. ಮಟ್ಕಾ ಸಂಘ ಅರ್ಧದಲ್ಲೇ ವಿಸರ್ಜನೆಯಾಗದೇ ಮುಂದುವರಿಯುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.

(ಇನ್ನಷ್ಟು ಮಾಹಿತಿಯನ್ನ ಮುಂದಿನ ಸುದ್ದಿಯಲ್ಲಿ ನೀಡಲಾಗುವುದು)

ಇದನ್ನೂ ಓದಿ/ ದಿವಂಗತ ಬಂಗಾಲಿ ಮಾಸ್ತರ್ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ