ಸುದ್ದಿಬಿಂದು ಬ್ಯೂರೋ ವರದಿ
ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಪಟ್ಟಣದ ನಿವಾಸಿ ಬಸಯ್ಯ ಏಣಗಿಮಠ (62) ಎಂಬುವವರು ತಮ್ಮ ಪುತ್ರ ವಿಜಯ ಏಣಗಿಮಠ ನಡೆಸಿದ ದಾಳಿಯಿಂದ ಗಂಭೀರವಾಗಿಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಆಟವಾಡಿಸುವ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿದ್ದು, “ನನ್ನ ಮಕ್ಕಳನ್ನು ಅಣ್ಣನ ಮನೆಗೆ ಕರೆದುಕೊಂಡು ಹೋಗಬೇಡ” ಎಂದು ವಿಜಯ ಏಣಗಿಮಠ ತಂದೆ ಬಸಯ್ಯ ಅವರಿಗೆ ಹೇಳಿದ್ದಾನೆ ಎನ್ನಲಾಗಿದೆ.

ಇದಕ್ಕೆ ತಂದೆ ಮಗನಿಗೆ ಬುದ್ಧಿವಾದ ಹೇಳಿದಾಗ, ಕೋಪಗೊಂಡ ವಿಜಯ ಚಾಕುವಿನಿಂದ ತಂದೆಗೆ ಇರಿದಿದ್ದಾನೆ ಎನ್ನಲಾಗಿದೆ.ಗಾಯಗೊಂಡ ಬಸಯ್ಯ ಅವರ ಇಬ್ಬರು ಮಕ್ಕಳು ಅಕ್ಕಪಕ್ಕದಲ್ಲೇ ವಾಸವಿದ್ದು, ಮೊಕ್ಕಳನ್ನು ಆಟವಾಡಿಸಲು ಕರೆದುಕೊಂಡು ಹೋಗುವ ವಿಚಾರವೇ ಗಲಾಟೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೈಲಹೊಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ/ಜೋಯಿಡಾದಲ್ಲಿ ಪತ್ತೆಯಾದ ಧಾರವಾಡ ಧಾರವಾಡದಲ್ಲಿ ಅಪಹರಣಕ್ಕೊಳಗಾದ ವಿದ್ಯಾರ್ಥಿಗಳು