ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಶಿರಸಿ–ಕುಮಟಾ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಂದ್ ಮಾಡಲಾಗಿದ್ದ ಬಸ್ ಸಂಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರ ಸೂಚನೆಯ ಮೇರೆಗೆ ಪುನರಾರಂಭಿಸಲಾಗಿದೆ. ಹೆದ್ದಾರಿಯಲ್ಲಿ ಮತ್ತೆ ಬಸ್ ಸಂಚಾರ ಆರಂಭಗೊಂಡಿರುವುದು ಪ್ರಯಾಣಿಕರಲ್ಲಿ ಸಂತಸ ತಂದಿದೆ.

ಶಿರಸಿ ಹೆದ್ದಾರಿ ಕಾಮಗಾರಿ ಹಿನ್ನೆಲೆ ಬಸ್ ಸಂಚಾರ ಬಂದ್ ಮಾಡಲಾಗಿದ್ದರಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.ಶಿರಸಿಗೆ ಪ್ರಯಾಣಿಸಬೇಕಾದವರು ಯಲ್ಲಾಪುರ, ಯಾಣ, ಸಿದ್ದಾಪುರ ಮಾರ್ಗವಾಗಿ ಸುತ್ತುಹೋಗಿ ಶಿರಸಿ ತಲುಪಬೇಕಾದ ಅನಿವಾರ್ಯತೆ ಎದುರಾಗಿತ್ತು.ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಹಲವಾರು ಅನಾಹುತಗಳು ಕೂಡ ಸಂಭವಿಸಿದ್ದವು.

ಶಿರಸಿ ಹೆದ್ದಾರಿಯಲ್ಲಿ ಯಾವಾಗ ಬಸ್ ಸಂಚಾರ ಆರಂಭವಾಗಲಿದೆ ಎಂಬುದನ್ನು ಜಿಲ್ಲೆ ಹಾಗೂ ರಾಜ್ಯದ ಜನ ಎದುರು ನೋಡುತ್ತಿದ್ದರು. ಇದೇ ವೇಳೆ ಶಿರಸಿ ಮಾರಿಕಾಂಬಾ ಜಾತ್ರೆಯೂ ಸಮೀಪಿಸುತ್ತಿದ್ದರಿಂದ, ಬಸ್ ಸಂಚಾರ ಆರಂಭವಾಗದೇ ಇದ್ದರೆ ಭಕ್ತರಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇತ್ತು.
ಜನರ ಸಮಸ್ಯೆಯನ್ನು ಹತ್ತಿರದಿಂದ ಅರಿತ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಶಿರಸಿ–ಕುಮಟಾ ಹೆದ್ದಾರಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಡಿಸೆಂಬರ್ 30ರಿಂದ ಕುಮಟಾ–ಶಿರಸಿ ಹೆದ್ದಾರಿಯಲ್ಲಿ ಬಸ್ ಸಂಚಾರ ಪುನರಾರಂಭಿಸಲಾಗಿದೆ.

ಹೋರಾಟಕ್ಕೆ ಸಿಕ್ಕ ಜಯ
ಕುಮಟಾ–ಶಿರಸಿ ಹೆದ್ದಾರಿ ಕಾಮಗಾರಿ ಆರಂಭವಾದ ದಿನಗಳಿಂದಲೇ ಕನ್ನಡಪರ ಸಂಘಟನೆಯ ಭಾಸ್ಕರ ಪಟಗಾರ, ರಾಜು ಮಾಸ್ತಿಹಳ್ಳ, ಮಹೇಂದ್ರ ನಾಯ್ಕ ಸೇರಿದಂತೆ ಅನೇಕರು ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ನಡೆಯದಿರುವುದನ್ನು ಖಂಡಿಸಿ ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಮತ್ತೆ ಪ್ರತಿಭಟನೆಗೆ ಇಳಿದ ಹೋರಾಟಗಾರರು, ಹೆದ್ದಾರಿಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಿರುವುದನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸಿ, ಸಾರಿಗೆ ಬಸ್ ಸಂಚಾರಕ್ಕೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು.

ಇತ್ತೀಚೆಗೆ ಸಚಿವ ಮಂಕಾಳ್ ವೈದ್ಯ ಅವರು ಆಂದ್ಲೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾಸ್ಕರ ಪಟಗಾರ ಅವರು ಈ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದರು. ಈ ವೇಳೆ ಸಚಿವರು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಸೂಚನೆ ನೀಡಿರುವುದನ್ನ ಇಲ್ಲಿ ಸ್ಮರಿಸಬಹುದು.