ಶ್ರಾವಣ ಮಾಸದಲ್ಲಿ ಆಚರಿಸುವ ವಿಶೇಷ ಹಬ್ಬವೆಂದರೆ ವರಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆ ಬರುವ ಮೊದಲು ವರಮಹಾಲಕ್ಷ್ಮಿ ವ್ರತವನ್ನು ಸನಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವವರು.
ಓಂ ಶ್ರೀ ಮಹಾ ಲಕ್ಷ್ಮೈಚ ವಿದ್ಮಹೇ
ವಿಷ್ಣು ಪತ್ನೇ ಚ ಧೀಮಹಿ
ತನ್ನೋ ಲಕ್ಷ್ಮಿ ಪ್ರಚೋದಯಾತ್
ಅಷ್ಟಲಕ್ಷ್ಮಿಯರನ್ನು ಏಕರೂಪಗೊಳಿಸಿ ವರಮಹಾಲಕ್ಷ್ಮಿ ಹಬ್ಬದ ದಿವಸ ಪೂಜಿಸುವರು. ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಸಂತಾನ ಲಕ್ಷ್ಮಿ ಎಂಬುದಾಗಿ ನಾನಾ ರೀತಿಯಲ್ಲಿ ಸ್ತುತಿಸುತ್ತೇವೆ.
ಸಂಪ್ರದಾಯಸ್ಥ ಎಲ್ಲಾ ಮನೆ_ಮನೆಗಳಲ್ಲಿಯೂ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿಕೊಂಡು ಬಂದಿರುವವರು.
ಸಾಮಾನ್ಯವಾಗಿ ಈ ವ್ರತವನ್ನು ಕಳಸ ಪ್ರತಿಷ್ಠಾಪನೆ ಮಾಡಿ ಚಿನ್ನದ ಆಭರಣಗಳು ಮತ್ತು ಹಣವನ್ನು ಇಟ್ಟು ಅವರವರ ಅನುಕೂಲಕ್ಕೆ ತಕ್ಕಂತೆ ಪೂಜಿಸುವರು. ವ್ರತಾಚರಣೆಯ ದಿವಸ ಮಡಿವಸ್ತ್ರಗಳನ್ನು ದರಿಸಿ, ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸುವರು. ಮನೆಯ ಪೂರ್ವಭಾಗದಲ್ಲಿ ಅಷ್ಟದಳ ಪದ್ಮ ಮತ್ತು ಸ್ವಸ್ಥಿಕ ಚಿನ್ನಯ ರಂಗೋಲಿ ಮೂಡಿಸಿ ಅಗಲವಾದ ಹರಿವಾಣದಲ್ಲಿ ಅಕ್ಕಿಯನ್ನು ತುಂಬಿಸಿ ಅದರ ಮೇಲೆ ಕೆಂಪು ಬಣ್ಣದ ವಸ್ತ್ರವನ್ನು ಹೊದಿಸಿ ನೀರು ತುಂಬಿರುವ ಕಳಸವಿಡುವರು. ಕಳಸದೊಳಗೆ ಶ್ರೀಗಂಧ, ಅರಿಸಿಣ, ಕುಂಕುಮ, ತುಳಸಿದಳ, ಹೂವು, ನಾಣ್ಯ, ಚಿನ್ನ, ಬೆಳ್ಳಿ ಹೀಗೆ ನವ ವಿಧವನ್ನು ಸೇರಿಸಿ ಐದು ದಳದ ಮಾವಿನ ಎಲೆಗಳ ಮೇಲೆ ತೆಂಗಿನ ಕಾಯಿ ಇಡುವರು.
ತುಪ್ಪದ ದೀಪವನ್ನು ಹಚ್ಚುವುದರೊಂದಿಗೆ ದೇವಿಯ ನೈವೇದ್ಯಕ್ಕೆ ಹಣ್ಣು, ಕಾಯಿಯ ಜೊತೆಗೆ ಐದು ಅಥವಾ ಹನ್ನೆರಡು ವಿಧದ ನೈವೇದ್ಯ ಮಾಡಿಡುವರು. ‘ಪದ್ಮಾಸನೇ ಪದ್ಮಕರೆ’ ಎಂಬ ಶ್ಲೋಕವನ್ನು ಹೇಳಿ ವೇದೋಕ್ತ ರೀತಿಯಲ್ಲಿ ದೇವಿಯನ್ನು ಆವಾಹನೆ ಮಾಡಿ ಪೂಜಿಸಿ ಇಷ್ಟ ಸಿದ್ಧಿಯನ್ನು ಬೇಡುವರು.ಬಳಿಕ ಮುತೈದೆಯರಿಗೆ ಅರಿಸಿಣ ಕುಂಕುಮ ಬಾಗಿನ ಕೊಟ್ಟು ನಮಸ್ಕರಿಸಿ ಅನ್ನ ಸಂತರ್ಪಣೆ ಇಲ್ಲವೇ ಸಿಹಿ ತಿಂಡಿ ಪೂಜಾ ಪ್ರಸಾದವನ್ನು ಕೊಡುವರು.
ಹೀಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ
‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಮತ್ತೊಮ್ಮೆ ಮಗದೊಮ್ಮೆ ಶ್ರೀ ವರ ಮಹಾಲಕ್ಷ್ಮಿಯನ್ನು ಪ್ರಾರ್ಥಿಸೋಣ.
ಕು. ಜಿ… ✍️
ಇದನ್ನೂ ಓದಿ: Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ

