ಸುದ್ದಿಬಿಂದು ಬ್ಯೂರೋ‌‌‌ ವರದಿ
ದಾಂಡೇಲಿ : ಮಾಡಿರುವ ಸಾಲವನ್ನು ತೀರಿಸಲು ಕರುಳಬಳ್ಳಿಯನ್ನೇ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ಹಳೆ ದಾಂಡೇಲಿಯಲ್ಲಿ ನಡೆದಿದೆ.

ಈ ಘಟನೆಯ ಕುರಿತಂತೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಕರ ಇವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರು ನೀಡಿದ ದೂರಿನಲ್ಲಿ ಹಳೆದಾಂಡೇಲಿಯ ಸ್ವಾಮಿಲ್ ರಸ್ತೆಯ ನಿವಾಸಿ ಮಾಹೀನ ವಸೀಂ ಚಂಡುಪಟೇಲ್ ಮತ್ತು ವಸೀಂ ನಜೀರ್ ಚಂಡುಪಟೇಲ್ ಎಂಬವರೆ ಸಾಲ ತೀರಿಸುವುದಕ್ಕಾಗಿ ಮಗುವನ್ನು ಮಾರಾಟ ಮಾಡಿದ ದಂಪತಿಗಳಾಗಿದ್ದಾರೆ.

ಮಾಹೀನ ವಸೀಂ ಚಂಡುಪಟೇಲ್ ಈಕೆ ಹೆರಿಗೆ ಮಾಡಿಕೊಳ್ಳಲು ಹಳೆ ದಾಂಡೇಲಿಯ ದೇಶಪಾಂಡೆ ನಗರದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದು ಜೂನ್.17ರಂದು ಈಕೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇವಳು ತುಂಬಾ ಸಾಲ ಮಾಡಿಕೊಂಡಿದ್ದು, ಸಂಘದ ಸಾಲಗಾರರು ಸಾಲದ ಹಣವನ್ನು ಕೊಡುವಂತೆ ಪದೇಪದೇ ಕಿರಿಕಿರಿ ಮಾಡುತ್ತಾ ಇದ್ದ ಹಿನ್ನಲೆಯಲ್ಲಿ ಇವಳು ಹಾಗೂ ಇವಳ ಪತಿ ವಸೀಂ ನಜೀರ್ ಚಂಡುಪಟೇಲ್ ಸೇರಿ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿ, ಮಗುವನ್ನು ಧಾರವಾಡಕ್ಕೆ ಹೋಗಿ ಬೆಳಗಾವಿಯ ನೂರ್ ಅಹಮ್ಮದ್ ಎಂಬಾತನಿಗೆ ಮೂರು ಲಕ್ಷ ರೂಪಾಯಿ ಹಣಕ್ಕೆ ಮಾರಾಟ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ.ಜಿ ಮತ್ತು ಜಗದೀಶ.ಎಂ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜೈಪಾಲ್ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಬಸವರಾಜ ಒಕ್ಕುಂದ, ಪೊಲೀಸ್ ಸಿಬ್ಬಂದಿಗಳಾದ ಸಿದ್ರಾಮ್ ರಾಮರಥ, ಚಂದ್ರಶೇಖರ ಪಾಟೀಲ್, ಜ್ಯೋತಿ ಬಾಳೇಕರ, ಮಹಾಂತೇಶ ಜಾಮಗೌಡ ಅವರ ತಂಡ ಬೆಳಗಾವಿಗೆ ಹೋಗಿ ಆಪಾದಿತರನ್ನು ಹಾಗೂ ಮಾರಾಟ ಮಾಡಿದ್ದ ಮಗುವನ್ನು ರಕ್ಷಣೆ ಮಾಡಿಕೊಂಡು ಬಂದು, ಮಗುವನ್ನು ರಕ್ಷಿಸಿ ಮಗುವಿನ ಸುರಕ್ಷತೆಯ ಬಗ್ಗೆ ಶಿರಸಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಶುಕ್ರವಾರ ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿ ಆರೋಪಿತರಾದ ಬೆಳಗಾವಿ ಜಿಲ್ಲೆಯ ಆನಗೋಳದ ನಿವಾಸಿಗಳಾದ ನೂರು ಮಹಮ್ಮದ್ ಅಬ್ದುಲ್ ಮಜೀದ್ ನಾಯ್ಕ ಮತ್ತು ಕಿಶನ್ ಶ್ರೀಕಾಂತ ಐರೇಕರ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆಪಾದಿತರ ಪತ್ತೆ ಕಾರ್ಯ ಮುಂದುವರೆದಿದೆ.

ದೂರು ದಾಖಲಾಗಿ 24 ಗಂಟೆಯೊಳಗಡೆ ಆರೋಪಿತರನ್ನು ದಸ್ತಗಿರಿ ಮಾಡಿ, ಮಗುವನ್ನು ರಕ್ಷಣೆ‌ ಮಾಡಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ..

ಇದನ್ನೂ ಓದಿ:ಲಂಚದ ಸರ್ಜನ್‌ಗೆ ‘ಪ್ರಮೋಷನ್ : ಜೈಲಿನಲ್ಲಿ ‌”ಶಿವ”.. ಆನಂದ……