ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಹೊಂದಾಣಿಕೆ ನಡೆದು ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯಾಗುತ್ತಿದ್ದಂತೆ ಬಿಜೆಪಿ ನಿಧಾನವಾಗಿ ಜೆಡಿಎಸ್ ಅನ್ನು ನುಂಗುತ್ತಿದೆ ಎಂಬ ಭಾವನೆ ಜೆಡಿಎಸ್ ಕಾರ್ಯಕರ್ತರಲ್ಲಿ ಬರುತ್ತಿದೆ.
ಈಗ ರಾಜ್ಯದಲ್ಲಿ ಜೆಡಿಎಸ್ ತನ್ನ ಬೇರನ್ನು ಕಳೆದುಕೊಳ್ಳುತ್ತಿದೆ ಎಂದು ಭಾವನೆ ಜೆಡಿಎಸ್ ನ ಎರಡನೇ ಹಂತದ.ನಾಯಕರಲ್ಲಿ ಬಂದಿದ್ದು ಉತ್ತರ ಕನ್ನಡವೂ ಅದಕ್ಕೆ ಹೊರತಾಗಿಲ್ಲ. ಈಗ ಜಿಲ್ಲೆಯ ಜೆಡಿಎಸ್ ನಾಯಕರು ಐಡೆಂಟಿಟಿ ಕ್ರೈಸಿಸ್ನಿಂದ ನರಳುತ್ತಿದ್ದು ಅತ್ತ ಬಿಜೆಪಿಯ ಜೊತೆಗೂ ಹೊಂದಾಣಿಕೆಯಾಗಲಾಗದೇ,ಜೆಡಿಎಸ್ ಅನ್ನು ಸ್ವತಂತ್ರವಾಗಿ ಬೆಳೆಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಜೆಡಿಎಸ್ನಲ್ಲಿ ಹೇಳಿಕೊಳ್ಳುವಂತಹ ಮುಖಗಳು ಕೇವಲ ಒಂದು ನಾಲ್ಕಾರು ಮಾತ್ರ ಜಿಲ್ಲೆಯಲ್ಲಿದ್ದು ಈಗ ಮಾಜಿ ಮಂತ್ರಿ ಆನಂದ ಅಸ್ಫೋಟಕರ್ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಾರದು ಎಂಬುದು ಮನವರಿಕೆಯಾಗುತ್ತಿದ್ದಂತೆ ಕ್ಷೇತ್ರವನ್ನೇ ಬಿಟ್ಟು ಹೋಗಿದ್ದಾರೆ.
ಅವರ ಕೇಸರಿ ಶಾಲ್ ಧರಿಸಿದ ವಿವಿಧ ಭಂಗಿಯ ವಿಡಿಯೋಗಳು ಸಹ ಈಗ ಬರುತ್ತಿಲ್ಲ.ಸತೀಶ್ ಸೈಲ್ ಅವರಿಗೆ ಅದಿರು ಹಗರಣದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿದ್ದಂತೆ ಕಾರವಾರದಲ್ಲಿ ಉಪಚುನಾವಣೆ ನಡೆಯಬಹುದು ಎಂಬ ಕಾರಣಕ್ಕೆ ಆನಂದ ಆಸ್ಫೋಟಕರ ‘ಹಿಂದೂ ಹೃದಯ ಸಾಮ್ರಾಟ’ ಎಂಬ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದರು.ಕೇಸರಿ ಶಾಲ್ ಹಾಕಿಕೊಂಡು ಆನಂದ ಅವರು ಕ್ಷೇತ್ರದಲ್ಲಿ ಸುತ್ತಿದ್ದೇ ಸುತ್ತಿದ್ದು..! ಅವರು ತಮ್ಮ ಜೆಡಿಎಸ್ನ ಹಸಿರು ಶಾಲನ್ನು ಇಳಿಸಿ ಕೇಸರಿ ಸಾಲನ್ನು ಹಾಕಿಕೊಂಡಿದ್ದು ಪ್ರಯೋಜನವಾಗಿಲ್ಲ. ಕಾರವಾರ ಕ್ಷೇತ್ರದಲ್ಲಿ ಮುಂದಿನ ಆದೇಶದ ವರೆಗೆ ಚುನಾವಣೆ ನಡೆಸಬಾರದು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡುತ್ತಿದ್ದಂತೆ ಅವರು ಮತ್ತೆ ಬೆಂಗಳೂರು ಸೇರಿಕೊಂಡಿದ್ದಾರೆ. ಅವರ ಯಾವ ಅಭಿಮಾನಿಯೂ ಈಗ ಜೆಡಿಎಸ್ನ ಹೆಸರಿನಲ್ಲಿ ಓಡಾಡುತ್ತಿಲ್ಲ. ಕಾರವಾರದ ಮಟ್ಟಿಗೆ ಜೆಡಿಎಸ್ನ ಘಟಕ ಇದೆಯೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ.
ಕುಮಟಾದಲ್ಲಿ ಸೂರಜ್ ಸೋನಿ ಅವರು ಈಗ ಜಿಲ್ಲೆಯ ಜೆಡಿಎಸ್ನ ಏಕೈಕ ಮುಖವಾಗಿದ್ದಾರಾದರೂ ಅವರೂ ಸಹ ಗೊಂದಲದಲ್ಲಿದ್ದಂತಿದೆ. ಅವರ ಸ್ವಂತ ಸಹೋದರನೇ ಬಿಜೆಪಿಯಲ್ಲಿ ಜಿಲ್ಲಾಮಟ್ಟದ ಪದಾಧಿಕಾರಿಯಾಗಿದ್ದಾರೆ. ಸೂರಜ್ ಸೋನಿ ಪ್ರತಿ ಬಾರಿಯೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಬಂದಾಗ ಪ್ರತ್ಯಕ್ಷರಾಗುತ್ತಿದ್ದಾರಾದರೂ ಆದು ಅವರ ವೋಟ್ ಬ್ಯಾಂಕ್ ಗೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ವಿಧಾನಸಭಾ ಚುನಾವಣೆಯ ವೇಳೆ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುವ ಅವಕಾಶವಿದ್ದರೆ ಅದು ಕುಮಟಾದಲ್ಲಿ ಮಾತ್ರ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕುಮಟಾದಲ್ಲೂ ರಾಜಕೀಯವಾಗಿ ಬೇರೆ ಬೇರೆ ಬೆಳವಣಿಗೆಗಳು ನಡೆದಿದ್ದು ಜೆಡಿಎಸ್ ಸಂಘಟನಾತ್ಮಕವಾಗಿ ಬಡವಾಗಿದೆ.
ಇನ್ನು ಭಟ್ಕಳದಲ್ಲಿ ಸಹ ಜೆಡಿಎಸ್ ಇದೆಯೂ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ.ಘಟ್ಟದ ಮೇಲಿನ ಪ್ರದೇಶದಲ್ಲಿ ಶಿರಸಿಯ ಉಪೇಂದ್ರ ಪೈ ಹಾಗೂ ಹಳಿಯಾಳದಲ್ಲಿ ಶ್ರೀಕಾಂತ ಫೋಟ್ನೇಕರ್ ಅವರು ಸ್ಪರ್ಧಿಸಿದ್ದರು. ಘೋಟ್ನೇಕರ ಅವರು ಈಗ ಬಿಜೆಪಿ ಸೇರಿದ್ದು ಜೆಡಿಎಸ್ನ ನಾಮಾವಶೇಷವಾಗಿದೆ ಎಂದು ಹೇಳಲಾಗಿದೆ. ಶಿರಯಲ್ಲಿ ಉಪೇಂದ್ರ ಪೈ ಇದ್ದಾರಾದರೂ ಅವರ ಅವರು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿ ಅಲ್ಲಿ ಶಾಸಕರಾಗುವ ಮಟ್ಟಿಗೆ ಬೆಳೆಯಲು ಸಾಧ್ಯವೇ? ಎಂಬ ಪ್ರಶ್ನೆಯು ಈಗ ಉದ್ಭವವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಈಗ ಕಾಗದದ ಮೇಲೆ ಮಾತ್ರ ಇದ್ದು ಅದರ ಆಸ್ತಿತ್ವದ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿವೆ,
ಇದನ್ನೂ ಓದಿ