ಸುದ್ದಿಬಿಂದು ಬ್ಯೂರೋ‌ ವರದಿ
Dandeli /ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು ದಾಳಿಯಿಂದ ಏಳೆಂಟು ಜನ ಕಾರ್ಮಿಕರಿಗೆ ಗಾಯವಾದ ಘಟನೆ ನಡೆದಿದೆ.

ಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಹಾತಿ ಗೋಡಾನ್ ಕಟ್ಟಡದ ಹೊರಬದಿಯಲ್ಲಿ 30ಕ್ಕೂ ಅಧಿಕ ಜೇನುಗೂಡುಗಳಿದ್ದು, ಇಲ್ಲಿ ಸುತ್ತಮುತ್ತ ಇರುವ ವಿವಿಧ ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಪ್ರತಿದಿನವೂ ಭಯದಿಂದಲೇ ಕೆಲಸ ನಿರ್ವಹಿಸಬೇಕಾದ ಸ್ಥಿತಿಯಿದೆ. ಶುಕ್ರವಾರ ಹೆಜ್ಜೇನು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಹತ್ತಿರದ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಏಳೆಂಟು ಕಾರ್ಮಿಕರಿಗೆ ಹೆಜ್ಜೇನು ಕಚ್ಚಿರುವುದರಿಂದ ಗಾಯವಾಗಿದೆ.

ಗಾಯಗೊಂಡವರ ಪೈಕಿ ನಿರ್ಮಲ ನಗರದ ಅನಿಲ್ ಮತ್ತು ಸಂತೋಷ ಹಾಗೂ ಗಾಂಧಿನಗರದ ಕಾರ್ತಿಕ್ ಮತ್ತು ಅಂಕಿತ್ ಇವರಿಗೆ ಹೆಚ್ಚಿನ ಪ್ರಮಾಣದ ಗಾಯವಾಗಿದ್ದು, ಇವರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಜ್ಜೇನುಗಳು ಅಂಬೇವಾಡಿ ಕೈಗಾರಿಕಾ ಪ್ರದೇಶದ ಬಿಹಾತಿ ಗೋಡಾನ್ ಕಟ್ಟಡದ ಹೊರಗಡೆ ಗೂಡು ಕಟ್ಟಿಕೊಂಡಿದ್ದು, ಸ್ಥಳೀಯ ಕಾರ್ಮಿಕರಿಗೆ ಇದರಿಂದ ತೊಂದರೆಯಾಗುವುದು ನಿಶ್ಚಿತ ಎಂಬ ಮಾತು ಕೇಳಿ ಬರತೊಡಗಿದೆ. ಈ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ