ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ತಾಲೂಕಿನಲ್ಲಿ ಕೆಲ ವರ್ಷದಿಂದ ಪ್ರವಾಸಿಗರ ಆಕರ್ಷಣಿಯವಾಗಿ ಮಾರ್ಪಟ್ಟಿದ್ದ ಶರಾವತಿ ನದಿಯಲ್ಲಿ ಬೋಟಿಂಗ್ ವಿಹಾರ ಬುಧವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ನೂರಾರು ಪ್ರವಾಸಿ ಬೋಟ್ಗಳು ನೀರಿಗೆ ಇಳಿಯದೇ ನದಿಯ ಎರಡೂ ತಟದಲ್ಲಿ ಲಂಗರು ಹಾಕಿ ನಿಂತುಕೊಳ್ಳುವಂತಾಗಿದೆ. ಕೇರಳ ಪ್ರವಾಸೋದ್ಯಮಕ್ಕೆ ಸರಿಸಾಟಿಯಾಗುವಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಳಗಿನಪಾಳ್ಯ, ಮತ್ತು ಕಾಸರಕೋಡ ಕಾಂಡ್ಲಾವನಕ್ಕೆ ಹೊಂದಿಕೊಂಡಿರುವ ಶರಾವತಿ ನದಿಯಲ್ಲಿ ಬೋಟಿಂಗ್ ಉದ್ಯಮ ಬೆಳೆದಿದೆ.
ನದಿಯ ಹರಿವಿನ ವ್ಯಾಪ್ತಿಯ ಸುಂದರ ಪರಿಸರಕ್ಕೆ ಮನಸೋತು ರಾಜ್ಯ, ಹೊರರಾಜ್ಯಗಳ ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಪ್ರೀ ವೆಡ್ಡಿಂಗ್ ಶೂಟಿಂಗ್ಗೆ ಇಲ್ಲಿನ ಪರಿಸರ ಹೇಳಿ ಮಾಡಿಸಿದ ಸ್ಥಳ ಎನ್ನುವಂತೆ ಸಾವಿರಾರು ಪ್ರವಾಸಿಗರು ಸಂಖ್ಯೆಯಲ್ಲಿ ಶರಾವತಿ ಬೋಟಿಂಗ್ಗೆ ಮುಗಿಬೀಳುತ್ತಿದ್ದರು. ಆದರೆ ಶರಾವತಿ ನದಿಯಲ್ಲಿ ಅವ್ಯಹತವಾಗಿ ರಂಗು ರಂಗಿನ- ಕಲರವ ಎಬ್ಬಿಸಿದ್ದ ಬೋಟಿಂಗ್ ವ್ಯವಹಾರಕ್ಕೆ ಸ್ಥಳಿಯರಿಂದ ಹಲವು ಬಾರಿ ವಿರೋಧ ವ್ಯಕ್ತವಾಗಿತ್ತು.
ಇದೀಗ ಕಳೆದ ಒಂದೆರಡು ದಿನದ ಹಿಂದೆ ಕಾಸರಕೋಡ-ಕಾಂಡ್ಲಾವನದಲ್ಲಿ ಕುಮಟಾ ತಾಲೂಕಿನ ಗಂಗಾವಳಿಯ ಟೂರಿಸ್ಟ್ ಚಾಲಕನೊಬ್ಬನಿಗೆ
ಸ್ಥಳೀಯ, ಬೋಟಿಂಗ್ ಸಂಬಂಧಪಟ್ಟವರು ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ಕಾರಣಕ್ಕೆ ತಾಲೂಕಿನಲ್ಲಿ ಬೋಟಿಂಗ್ ವಿಹಾರ ಸ್ಥಗಿತಗೊಂಡಿದೆ.
ನದಿಯ ಪಕ್ಕದ ಬೋಟಿಂಗ್ ನಿವಾಸಿಗಳು ಕಿರಿಕಿರಿಯಿಂದ ನಿರಾಳರಾಗಿದ್ದಾರೆ. ಸಣ್ಣ ಪುಟ್ಟ ದೋಣಿಯವರು ನಿರಾತಂಕವಾಗಿ ಓಡಾಡುತ್ತಿದ್ದಾರೆ. ಬೋಟಿಂಗ್ ನಂಬಿ ಉದ್ಯೋಗ ಮಾಡಿಕೊಂಡಿದ್ದ ಅಂಗಡಿ, ತಂಪು ಪಾನೀಯ, ಚಹಾ ಅಂಗಡಿ, ಫಾಸ್ಟ್ ಫುಡ್ ಇನ್ನಿತರ ಅಂಗಡಿಗಳು ಪ್ರವಾಸಿಗರು ಇಲ್ಲದೆ ಬಿಕೋ ಎನ್ನುತ್ತಿದೆ.
ಕೆಲವು ಅಂಗಡಿ ಬಂದಾಗಿವೆ. ಬೆಳಿಗ್ಗೆಯಿಂದ ಸಂಜೆ ತನಕ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಪ್ರವಾಸಿ ತಾಣ ಖಾಲಿ ಖಾಲಿಯಾಗಿದೆ. ದಿಡೀರನೇ ಬೋಟಿಂಗ್ ಸ್ಥಗಿತಗೊಂಡಿದ್ದರಿಂದ ಬೇರೆ ಬೇರೆ ಕಡೆಯಿಂದ ಬಂದಿರುವ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ.. ಕೆಲವರು ತಾವು ತಂಗಿರುವ ಹೋಟೆಲ್, ಹೋಂಸ್ಟೇಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನೂ ಕೆಲವರು ಪಕ್ಕದ ಮುರುಡೇಶ್ವರ, ಗೋಕರ್ಣ ಕಡೆಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ
- ಮೂರು ವರ್ಷದಲ್ಲೇ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಮಂಕಾಳ್ ವೈದ್ಯ
- ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು
- ಕರಾವಳಿಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಡಿಕೆಶಿ ಸಚಿವ ಸಂಪುಟದಲ್ಲಿ ಮಾಂಕಾಳ ವೈದ್ಯರಿಗೆ ಹೊಸ ಜವಾಬ್ದಾರಿ..!
- 11 ಮಂದಿಯ ದುರಂತದ ಸೂತಕದಲ್ಲೂ ಬಿಜೆಪಿ ರಾಜಕೀಯ; ಕಾಂಗ್ರೇಸ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ಆಕ್ರೋಶ

