ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಬರ್ಗಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ನೂರಾರು ಮಕ್ಕಳಿಗೆ ಅಕ್ಷರ ಜ್ಞಾನ, ಪ್ರೀತಿ, ಮಮತೆ ಹಾಗೂ ಉತ್ತಮ ಸಂಸ್ಕಾರ ನೀಡಿದ ಸುಜಾತಾ ರಮೇಶ್ ಪಂಡಿತ್ ಅವರು ಸೇವಾ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ, ಅವರಿಗೆ ನಾಳೆ ಗೌರವದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವೇ ಏಕೈಕವಾಗಿದ್ದ ಕಾಲದಿಂದ ಮಕ್ಕಳಿಗೆ ಅಕ್ಷರದ ಮೊದಲ ಹೆಜ್ಜೆ ಕಲಿಸುತ್ತಾ ಬಂದ ಸುಜಾತಾ ಟೀಚರ್, ತಮ್ಮ ಸರಳತೆ, ಆತ್ಮೀಯತೆ ಹಾಗೂ ಮಕ್ಕಳ ಮೇಲಿನ ಕಾಳಜಿಯಿಂದ ಗ್ರಾಮಸ್ಥರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.ಅವರ ಕೈಹಿಡಿದು ‘ಅ, ಆ’ ಕಲಿತ ಬರ್ಗಿ ಗ್ರಾಮದ ನೂರಾರು ಮಕ್ಕಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಬಾಲ್ಯದಲ್ಲಿ ಸುಜಾತಾ ಟೀಚರ್ ಅವರಿಂದ ಪಡೆದ ಪ್ರೀತಿ, ಮಮತೆ ಹಾಗೂ ಶಿಕ್ಷಣವನ್ನು ಅನೇಕ ಹಳೆಯ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸುತ್ತಿದ್ದಾರೆ.

ಅಂಗನವಾಡಿಗೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಂಡು, ಶಿಕ್ಷಣದ ಜೊತೆಗೆ ಸ್ವಚ್ಛತೆ, ಶಿಸ್ತು, ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ವಿಶೇಷ ಕಾಳಜಿ ವಹಿಸಿದ್ದರು. ಹೀಗಾಗಿ ಮಕ್ಕಳ ಪಾಲಿಗೆ ಅವರು ಕೇವಲ ಶಿಕ್ಷಕಿಯಾಗಿರದೆ, ತಾಯಿಯ ಮಮತೆಯನ್ನೇ ನೀಡಿದ ಆತ್ಮೀಯ ‘ಸುಜಾತಾ ಅಕ್ಕ’ನಾಗಿ ಗುರುತಿಸಿಕೊಂಡಿದ್ದಾರೆ.

ನಾಳೆ ಬೀಳ್ಕೊಡುಗೆ ಸಮಾರಂಭ
ಸುಜಾತಾ ಪಂಡಿತ್ ಅವರ ಸುದೀರ್ಘ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಅವರಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಮಾಜ ಬಾಂಧವರ ವತಿಯಿಂದ ಸೆಪ್ಟೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಬರ್ಗಿಯ ಜಟಕೇಶ್ವರ ದೇವಸ್ಥಾನದಲ್ಲೊ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಕ್ಕಳ ಪಾಲಿನ ತಾಯಿಯಂತೆ ಸೇವೆ ಸಲ್ಲಿಸಿದ ಸುಜಾತಾ ಟೀಚರ್ ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಲಿದ್ದಾರೆ.

“ಸುಜಾತಾ ಟೀಚರ್ ಅವರ ಕೈಹಿಡಿದು ಕಲಿತ ‘ಅ, ಆ’ ಅಕ್ಷರಗಳು ನಮ್ಮ ಬದುಕಿನ ಮೊದಲ ಹೆಜ್ಜೆಯಾಗಿವೆ. ಅವರು ಕಲಿಸಿದ ಅಕ್ಷರಜ್ಞಾನ ಹಾಗೂ ನೀಡಿದ ಮಮತೆ ನಮ್ಮ ಜೀವನದುದ್ದಕ್ಕೂ ಸ್ಮರಣೀಯ,” ಎಂದು ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗೌರವದಿಂದ ಸ್ಮರಿಸಿದ್ದಾರೆ.