ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ವಿಧಾನಸಭೆ ಉಪ ಸಭಾಪತಿ ಮಂಕಾಳ ವೈದ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಡಗುಂಜಿ ವಿನಾಯಕ ನನ್ನ ಆರಾಧ್ಯ ದೇವರು. ನಾನು ಕೇಳಿದ್ದನ್ನು ಗಣಪತಿ ಕೊಟ್ಟಿದ್ದಾನೆ. ಅವನ ಇಚ್ಛೆಯಂತೆ ಎಲ್ಲವೂ ಆಗಿದೆ, ಆಗುತ್ತೆ ಹಾಗೂ ಮುಂದೆಯೂ ಆಗುತ್ತದೆ” ಎಂದು ಹೇಳಿದರು. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ನಾಡಿನ ಜನರಿಗೆ ಸುಖ, ಸಮೃದ್ಧಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. “ಬೇಜಾರು ಮಾಡುವಂತಹ ಯಾವುದೇ ವಿಚಾರ ಇಲ್ಲ. ದೇವರ ಇಚ್ಛೆಯಂತೆ ಎಲ್ಲವೂ ನಡೆಯಬೇಕು” ಎಂದರು.
ಸಚಿವ ಸ್ಥಾನಕ್ಕೂ ಉಪ ಸಭಾಪತಿ ಹುದ್ದೆಗೂ ವ್ಯತ್ಯಾಸವಿಲ್ಲ
ತಾವು ಸಚಿವರಾಗಿದ್ದಾಗ ಜನರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿತ್ತು. ಇದೀಗ ಉಪ ಸಭಾಪತಿ ಹುದ್ದೆಯಲ್ಲಿದ್ದರೂ ವಿವಿಧ ಇಲಾಖೆಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿದೆ ಎಂದು ಮಂಕಾಳ ವೈದ್ಯ ಹೇಳಿದರು.
“ವಿಧಾನಸಭೆ ಉಪ ಸಭಾಪತಿ ಹುದ್ದೆಗೆ ಏರಿದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಟ್ಟುಪಾಡುಗಳಿವೆ ಎಂಬುದು ತಪ್ಪು. ಉಪ ಸಭಾಪತಿ ಎನ್ನುವುದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇರುವ ಒಂದು ಹುದ್ದೆ. ಸಚಿವರು, ಉಪ ಸಭಾಪತಿ ಎಂಬುದರಲ್ಲಿ ನನಗೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಸ್ಪಷ್ಟಪಡಿಸಿದರು.
ಯಾವುದೇ ಹುದ್ದೆಯಲ್ಲಿದ್ದರೂ ನಾನು ಜನಸಾಮಾನ್ಯ
ತಮ್ಮ ರಾಜಕೀಯ ನಿಲುವಿನ ಕುರಿತು ಮಾತನಾಡಿದ ಅವರು, ಪರ-ವಿರೋಧವಾಗಿ ಮಾತನಾಡುವವರು ಯೋಚನೆ ಮಾಡಿ ಮಾತನಾಡಬೇಕು. ಯೋಚನೆ ಮಾಡದೆ ಹೇಳಿಕೆ ನೀಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದರು.“ನಾನು ಯಾವುದೇ ಹುದ್ದೆಯಲ್ಲಿ ಕುಳಿತರೂ ನಾನೊಬ್ಬ ಜನಸಾಮಾನ್ಯ. ಯಾವ ಹುದ್ದೆಗೆ ಹೋದರೂ ನನ್ನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಯಾವುದೇ ಹುದ್ದೆಯೂ ಯಾರಿಗೂ ಶಾಶ್ವತವಲ್ಲ” ಎಂದು ಮಂಕಾಳ ವೈದ್ಯ ಹೇಳಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಉಪಸ್ಥಿತರಿದ್ದರು.

