ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ತಾಲೂಕಿನ ಕತ್ತಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಸಿ–ಮಟ್ಕಾ ದಂಧೆ ಮತ್ತು ಕೋಳಿ ಅಂಕ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅದರಲ್ಲೂ ಪೊಲೀಸ್‌ ಠಾಣೆಯ ಮೂರು ಪಿಟ್‌ ದೂರದಲ್ಲಿರುವ ಮೂರುಗೇಣು ಸ್ಥಳದಲ್ಲಿ ಯಾರ ಭಯವಿಲ್ಲದೆ ರಾಜಾ ರೋಷದಿಂದ “ಬಾಲʼ ಆಡಿಸುತ್ತಾ ನಿತ್ಯವೂ ಓಸಿ-ಮಟ್ಕಾ ದಂಧೆ ನಡೆಸಲಾತ್ತಿದೆ. ಎಂಬ ಆರೋಪ ಕೇಳಿಬರುತ್ತಿದೆ.

ಕತ್ತಗಾಲದ ಶಿರಗುಂಜಿ, ಮಾಬ್ಗಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಓಸಿ–ಮಟ್ಕಾ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಠಾಣೆಯಿಂದ ಅತಿ ಸಮೀಪದಲ್ಲಿರುವ ಮೂರುಗೇಣು ಪ್ರದೇಶದಲ್ಲಿ ಯಾರ ಭಯವಿಲ್ಲದೆ  ‘ಬಾಲ’ ಅಲ್ಲಾಡಿಸುತ್ತಾ ನಿತ್ಯವೂ ಓಸಿ ತೆಗೆದು ಕೊಳ್ಳಲಾಗುತ್ತಿದೆ ಎನ್ನುವ ಮಾತು ಕತ್ತಗಾಲ ಗ್ರಾಮದ ಆಚೆಗೂ ಕೇಳಿ ಬರುತ್ತಿದೆ.

ದುಡಿದ ಹಣ ಜೂಜಾಟಕ್ಕೆ?

ಕತ್ತಗಾಲ ಸುತ್ತಮುತ್ತಲಿನ ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳೇ ಇಂತಹ ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಸಂಪಾದಿಸಿದ ಅಲ್ಪಸ್ವಲ್ಪ ಹಣವನ್ನು ಓಸಿ–ಮಟ್ಕಾದ ಆಸೆಗೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. ಈ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಗೆ ತಿಳಿದಿರುವಾಗ,  ಕ್ರಮ ತೆಗೆದುಕೊಳ್ಳುವವರು ಪಕ್ಕದಲ್ಲೇ ಇದ್ದರೂ ಅವರಿಗೆ ಮಾಹಿತಿ ಇಲ್ಲವೇ? ಅಥವಾ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಓಸಿ–ಮಟ್ಕಾ ಜತೆಗೆ ಕೋಳಿ ಅಂಕದ ಸದ್ದು!

ಓಸಿ–ಮಟ್ಕಾ ದಂಧೆಯ ಆರೋಪ ಒಂದೆಡೆಯಾದರೆ, ಕತ್ತಗಾಲ ಸುತ್ತಮುತ್ತ ಕೋಳಿ ಅಂಕವೂ ನಿರಂತರವಾಗಿ ನಡೆಯುತ್ತಿದೆ ಎನ್ನುವ ಆರೋಪ ಮತ್ತೊಂದೆಡೆ. ಸ್ಥಳೀಯವಾಗಿ ‘ನಾಗದೇವ’ (ತಮ್ಮ)  ಎಂದು ಕರೆಯಲ್ಪಡುವ ದೇವರ ಸನ್ನಿಧಿಯ ಹೆಸರಿನಲ್ಲಿ ನಡೆಯುವ ಮಂಡಳಿಯೊಂದರ ಆಶ್ರಯದಲ್ಲಿ ಕೋಳಿ ಅಂಕ ಆಯೋಜಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಆಟ ಒಂದೇ ಗ್ರಾಮದಲ್ಲಿ ನಡೆಯುವುದಿಲ್ಲ ಎನ್ನಲಾಗಿದ್ದು, ಒಂದು ದಿನ ಶಿರಗುಂಜಿಯಲ್ಲಿ ನಡೆದರೆ ಮತ್ತೊಂದು ದಿನ ಮಾಬ್ಗಿಯಲ್ಲಿ, ಇನ್ನೊಂದು ದಿನ ಮತ್ತೊಂದು ಕಡೆ ಹೀಗೆ ಇವರ ಮೇಳ ಕತ್ತಾಗಲ ಸುತ್ತಮುತ್ತ ಭರ್ಜರಿ ಆಟ  ನಡೆಸಲಾಗುತ್ತದೆ ಎಂಬ ಆರೋಪವಿದೆ.

ಕೊನೆಯ ಕ್ಷಣದಲ್ಲಿ ಸ್ಥಳ ಬಯಲು?

ಕೋಳಿ ಅಂಕ ನಡೆಯುವ ಸ್ಥಳವನ್ನು ಮುಂಚಿತವಾಗಿ ಬಹಿರಂಗಪಡಿಸದೆ, ಆಟ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಭಾಗವಹಿಸುವವರಿಗೆ ದೂರವಾಣಿ ಮೂಲಕ ಸ್ಥಳದ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ. ಬಳಿಕ ಆಟಗಾರರು ನಿಗದಿಪಡಿಸಿದ ಸ್ಥಳಕ್ಕೆ ತೆರಳುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇಂದು ಕೋಳಿ ಅಂಕ ನಡೆದಿತ್ತೇ.?

ಇಂದಿಗೂ ಈ ಚಟುವಟಿಕೆಗಳು ಮುಂದುವರಿದಿವೆ ಎನ್ನುವ ಆರೋಪವಿದ್ದು, ಸೆಪ್ಟೆಂಬರ್‌ 1, 2026ರಂದು ಕೂಡ ಕತ್ತಗಾಲ ಭಾಗದಲ್ಲಿ ಕೋಳಿ ಅಂಕ ನಡೆಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಅಪರೂಪಕ್ಕೆ ನಡೆಯುವ ಆಟವಲ್ಲ ; ನಿರಂತರವಾಗಿ ನಡೆಯುತ್ತಿರುವ ಚಟುವಟಿಕೆ ಇದು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ‘ಮನೆ ದೇವರ ಪೂಜೆ ತಪ್ಪಿದರೂ ಕೋಳಿ ಅಂಕ ತಪ್ಪುವುದಿಲ್ಲ’ ಎನ್ನುವಷ್ಟರ ಮಟ್ಟಿಗೆ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತಮ್ಮಿಂದ ಸಾಧ್ಯವಾಗದೆ ಇದ್ದರೆ ಗುಪ್ತಚರ ಮಾಹಿತಿ ಸಂಗ್ರಹಿಸಿ, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ/ಬಿಗ್ ಬಾಸ್ ಸೀಸನ್ 13ಕ್ಕೆ ಆರಂಭದಲ್ಲೇ ಅಗ್ನಿಪರೀಕ್ಷೆ;  ಗ್ರ್ಯಾಂಡ್ ಪ್ರೀಮಿಯರ್‌ಗೆ ಎದುರಾಯ್ತಾ ಸಂಕಷ್ಟ..?