ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಮಾದನಗೇರಿಯ ಏಡಿ ಪಾರ್ಮ್‌ನಲ್ಲಿ ಸುಮಾರು 4.5 ಕೆಜಿ ತೂಕದ ಅಪರೂಪದ ದೈತ್ಯ ಕಲ್ಲು ಜೆಂಜಿ (ಮಡ್ ಕ್ರ್ಯಾಬ್) ಪತ್ತೆಯಾಗಿದ್ದು, ಏಡಿ ಸಾಕಾಣಿಕೆದಾರರು ಹಾಗೂ ಮೀನುಗಾರರಲ್ಲಿ ಸಂತಸ ಮೂಡಿಸಿದೆ.

ಅರಬ್ಬಿ ಸಮುದ್ರ ಹಾಗೂ ನದಿ ಸಂಗಮ ಪ್ರದೇಶಗಳಲ್ಲಿ ಬೆಳೆಯುವ ಈ ವಿಶಿಷ್ಟ ಕಲ್ಲು ಜೆಂಜಿ ತನ್ನ ಭಾರೀ ಗಾತ್ರ ಮತ್ತು ಉತ್ತಮ ಗುಣಮಟ್ಟದಿಂದ ಎಲ್ಲರ ಗಮನ ಸೆಳೆದಿದೆ.ಮಾದನಗೇರಿಯ ಖ್ಯಾತ ಏಡಿ ಸಾಕಾಣಿಕೆದಾರ ಭೈರವ ನಾಗಪ್ಪ ಹರಿಕಂತ್ರ ಅವರ ಏಡಿ ಪಾರ್ಮ್‌ನಲ್ಲಿ ಈ ಅಪರೂಪದ ಕಲ್ಲು ಜೆಂಜಿ ದೊರೆತಿದೆ. ಇಷ್ಟು ದೊಡ್ಡ ಗಾತ್ರದ ಕಲ್ಲು ಜೆಂಜಿ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಇಂತಹ ಏಡಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ.

ಕುಮಟಾ ತಾಲೂಕಿನ ಮಾದನಗೇರಿ, ಬೇಲೆಕೇರಿ, ತದಡಿ, ಹೊಸ್ಕಟ್ಟಾ, ಅಘನಾಶಿನಿ, ಬಾಡಾ, ಕಾಗಾಲ, ಕುಮಟಾ ಹಾಗೂ ಹೊನ್ನಾವರ ಭಾಗಗಳ ಸಮುದ್ರ-ನದಿ ಸಂಗಮ ಪ್ರದೇಶಗಳಲ್ಲಿ ಬೆಳೆಯುವ ಕಲ್ಲು ಜೆಂಜಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದೆ. ಇಲ್ಲಿಂದ ಮಂಗಳೂರು ಹಾಗೂ ಚೆನ್ನೈ ಮೂಲಕ ವಿಮಾನ ಮಾರ್ಗದಲ್ಲಿ ಸಿಂಗಾಪುರ, ಥೈಲ್ಯಾಂಡ್ ಮತ್ತು ಮಲೇಶಿಯಾ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ ಮೂರು ದಶಕಗಳಿಂದ ಏಡಿ ಸಾಕಾಣಿಕೆ ಮತ್ತು ಪೂರೈಕೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಗುಣಮಟ್ಟದ ಕಲ್ಲು ಜೆಂಜಿಗಳ ಮೂಲಕ ಉತ್ತರ ಕನ್ನಡದ ಹೆಸರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ.

ಕೊರೊನಾ ಅವಧಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡ ಪರಿಣಾಮ ಏಡಿ ರಫ್ತು ಸಂಪೂರ್ಣ ಕುಸಿದು ಸಾಕಾಣಿಕೆದಾರರು ಮತ್ತು ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದರು. ಆದರೆ ಇದೀಗ ವಿಮಾನ ಸೇವೆಗಳು ಸಹಜ ಸ್ಥಿತಿಗೆ ಮರಳಿರುವುದರಿಂದ ಮತ್ತೆ ವಿದೇಶಗಳಿಗೆ ಏಡಿ ರಫ್ತು ಚುರುಕುಗೊಂಡಿದ್ದು, ಉದ್ಯಮಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ.

ಆದರೆ ಪರಿಸರ ಬದಲಾವಣೆ, ನೈಸರ್ಗಿಕ ಕಾರಣಗಳು ಹಾಗೂ ಇತರ ಸವಾಲುಗಳಿಂದ ವರ್ಷದಿಂದ ವರ್ಷಕ್ಕೆ ಕಲ್ಲು ಜೆಂಜಿಗಳ ಲಭ್ಯತೆ ಕಡಿಮೆಯಾಗುತ್ತಿರುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ. ಬೇಡಿಕೆ ಹೆಚ್ಚುತ್ತಿರುವ ನಡುವೆಯೇ ಉತ್ಪಾದನೆ ಇಳಿಮುಖವಾಗುತ್ತಿರುವುದು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಸವಾಲಾಗುವ ಸಾಧ್ಯತೆ ಇದೆ.”ಹಲವು ವರ್ಷಗಳಿಂದ ಇಲ್ಲಿನ ಕಲ್ಲು ಜೆಂಜಿಗಳನ್ನು ಏಜೆಂಟರ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ವರ್ಷ ಉತ್ತಮ ಬೆಲೆ ದೊರೆತಿದ್ದರೂ ವರ್ಷದಿಂದ ವರ್ಷಕ್ಕೆ ಏಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ,” ಎಂದು ಏಡಿ ಪೂರೈಕೆದಾರ ಭೈರವ ನಾಗಪ್ಪ ಹರಿಕಂತ್ರ ತಿಳಿಸಿದ್ದಾರೆ.

ಇದನ್ನೂ ಓದಿ/ಜುಲೈ 15ರೊಳಗೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ