ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಆರೋಪಗಳ ಹಿನ್ನೆಲೆ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣೆ ನಡೆದ ತಕ್ಷಣ ತಮ್ಮ ಹೆಸರು ಯಾವುದೇ ಚರ್ಚೆಯಲ್ಲೂ ಇರಲಿಲ್ಲ. ಅಲ್ಲದೆ, ಈ ಸಂಬಂಧ ರಚಿಸಲಾದ ಸತ್ಯಶೋಧನ ಸಮಿತಿಯ ವರದಿಯಲ್ಲೂ ತಮ್ಮ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.”ಈಗ ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸುತ್ತಿದ್ದು, ಇದು ನನ್ನ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದಲೇ ತನ್ನ ವಿರುದ್ಧ ಸುಳ್ಳುಸುದ್ದಿ ಹರಡಲಾಗುತ್ತಿದೆ   ಎಂದು ಅವರು ಆರೋಪಿಸಿದರು. ತಾವು ಸದಾ ಪಕ್ಷನಿಷ್ಠೆಯಿಂದ ರಾಜಕೀಯ ನಡೆಸಿಕೊಂಡು ಬಂದಿರುವುದಾಗಿ ಹೇಳಿದ ದಿನಕರ ಶೆಟ್ಟಿ, “ನಾನು ಯಾವತ್ತೂ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಹಿಂದೆ ಜೆಡಿಎಸ್‌ನಲ್ಲಿ ಇದ್ದಾಗಲೂ ಯಾವುದೇ ಆಮಿಷಕ್ಕೆ ಬಲಿಯಾಗದೆ ಪಕ್ಷದ ಪರವಾಗಿ ದೃಢವಾಗಿ ನಿಂತಿದ್ದೆ. ಈಗಲೂ ಅದೇ ನಿಲುವನ್ನು ಮುಂದುವರಿಸಿಕೊಂಡಿದ್ದೇನೆ,” ಎಂದು ಹೇಳಿದರು.

ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದ ಅವರು, ಸತ್ಯಾಂಶ ಹೊರಬರಲಿದ್ದು, ಜನರು ಇಂತಹ ಸುಳ್ಳು ಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು

 ಇದನ್ನೂ ಓದಿ/ ಕುಮಟಾ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ