ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಕಾನೂನಿನ ಕೈಗಳು ಉದ್ದ ಎಂಬುದನ್ನು ಇನ್ಸಪೆಕ್ಟರ್ ಜಯಪಾಲ & ಟೀಂ.. ಸಾಬೀತುಪಡಿಸಿದೆ ಮೊಬೈಲ್ ಫೋನ್ ಕೂಡ ಬಳಸದೆ, ತಲೆಮರೆಸಿಕೊಂಡು ಪೊಲೀಸರಿಗೆ ನಿದ್ದೆಗೆಡಿಸಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ ಮಚ್ಚ ಮಂಜಾನನ್ನು ಮಹಾರಾಷ್ಟ್ರ ಗಡಿಯ ಸಾಂಗ್ಲಿ ಸಮೀಪ ಹಳಿಯಾಳ‌ ಪೊಲೀಸರು ಭಾನುವಾರದಂದು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸುವ ಮೂಲಕ ಯಶಸ್ವಿಯಾಗಿದೆ.

ಜೂನ್ 14ರಂದು ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡಿ, ಕರ್ತವ್ಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಮಂಜಾನ ದಾದಾಗಿರಿಯ ವಿಡಿಯೋಗಳು ರಾಜ್ಯಾದ್ಯಂತ ವೈರಲ್ ಆಗಿದ್ದವು. ಸ್ಥಳಕ್ಕೆ ಬಂದಿದ್ದ ಪೊಲೀಸರು ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು ಇಲಾಖೆಗೆ ಭಾರೀ ಮುಜುಗರ ತಂದಿತ್ತು. ಪರಿಣಾಮ ಪಿಎಸ್‌ಐ ಅಮಾನತು, 8 ಸಿಬ್ಬಂದಿ ವರ್ಗಾವಣೆ ಆಗಿತ್ತು.

ಆದರೆ ನಿಜವಾದ ಸವಾಲು ಎದುರಾಗಿದ್ದು ಬಳಿಕ. ಯಾವುದೇ ಮೊಬೈಲ್ ಬಳಸದ, ಡಿಜಿಟಲ್ ಸುಳಿವು ಸಿಗದ ಮಂಜಾನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಗ್ಗಂಟಾಗಿತ್ತು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಲೊಕೇಶನ್ ಇಲ್ಲದೆ ಆರೋಪಿಯನ್ನು ಹಿಡಿಯುವುದು ಸೂಜಿಯನ್ನು ಬಣವೆಯಲ್ಲಿ ಹುಡುಕಿದಂತೆ. ಆದರೂ ಛಲ ಬಿಡದ ಇನ್ಸಪೆಕ್ಟರ್ ಜಯಪಾಲ & ಟೀಂ.. ಹಳೆಯ ಶೈಲಿಯ ಖಚಿತ ಮಾಹಿತಿ ಜಾಲ, ಮಾನವ ಬೇಹುಗಾರಿಕೆ ಮತ್ತು ಕ್ಷೇತ್ರ ಮಟ್ಟದ ಕಾರ್ಯಾಚರಣೆಗೆ ಇಳಿಯಿತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ
ದೀಪನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ಹಳಿಯಾಳ ಮತ್ತು ದಾಂಡೇಲಿ ಪಿಎಸ್ಐ ಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್ ಮತ್ತು ಹಳಿಯಾಳ, ದಾಂಡೇಲಿ, ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಂಎಂ ಮುಲ್ಲಾ, ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ, ಮಂಜುನಾಥ ಬಾಲಿ, ಬಸವರಾಜ ಹಗರಿ ಸಿಬ್ಬಂದಿಗಳ ತಂಡ ಹಗಲು-ರಾತ್ರಿ ನಿದ್ದೆಗೆಟ್ಟು ಬಲೆ ಬೀಸಿತು. ಕೊನೆಗೂ ಬೇರೆ ರಾಜ್ಯಕ್ಕೆ ಪರಾರಿಯಾಗುತ್ತಿದ್ದ  ವೇಳೆ ಭಾನುವಾರ ಸಂಜೆ ಮಹಾರಾಷ್ಟ್ರ ಗಡಿಯಲ್ಲಿ ಮಂಜಾನನ್ನು ಸುತ್ತುವರಿದು ಬಂಧಿಸಲಾಯಿತು.

ಆರೋಪಿಯನ್ನು ತಕ್ಷಣ ಹಳಿಯಾಳಕ್ಕೆ ಕರೆತಂದು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ತಂತ್ರಜ್ಞಾನದ ನೆರವಿಲ್ಲದೆ, ಕೇವಲ ಚಾಣಾಕ್ಷತೆ, ತಂಡದ ಶ್ರಮ ಮತ್ತು ಕರ್ತವ್ಯ ನಿಷ್ಠೆಯಿಂದಲೇ ರೌಡಿಯನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ವೇಷ ಬದಲಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ ಮಚ್ಚ್ ಮಂಜಾ!
ಪೊಲೀಸರೊಂದಿಗೆ ರಂಪಾಟ ನಡೆಸಿ, ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಪ್ರಕರಣದ ಬಳಿಕ ಪರಾರಿಯಾಗಿದ್ದ ರೌಡಿ ಶೀಟರ್ ಮಚ್ಚ್ ಮಂಜಾ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ವೇಷ ಬದಲಿಸಿಕೊಂಡಿದ್ದ ಎನ್ನಲಾಗಿದೆ.
ಘಟನೆ ನಡೆದ ತಕ್ಷಣವೇ ತನ್ನ ಗುರುತು ಸಿಗದಂತೆ ಗಡ್ಡವನ್ನ ಬೋಳಿಸಿಕೊಂಡು ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದ ಎನ್ನಲಾಗಿದೆ.
ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿರದಿದ್ದರೆ ಕಾಡಿನತ್ತ ತೆರಳಿ ಅಡಗಿಕೊಳ್ಳುವ ಯೋಜನೆಯೂ ಹೊಂದಿದ್ದ ಎನ್ನಲಾಗಿದೆ.
ಇದೇ ತಂತ್ರವನ್ನು ಈ ಹಿಂದೆ ಹಲವು ಬಾರಿ ಬಳಸಿದ್ದ ಮಂಜಾ, ಪೊಲೀಸರನ್ನು ದಾರಿ ತಪ್ಪಿಸಲು ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ. ಆದರೆ, ಮಂಜನ ಆಪ್ತ ಸ್ನೇಹಿತರ ಮೂಲಕ ಮಾಹಿತಿ ಕಲೆಹಾಕಿದ ಹಳಿಯಾಳ ಪೊಲೀಸರು ಸೂಕ್ತ ಕಾರ್ಯಾಚರಣೆ ನಡೆಸಿ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ/ಮನೆಯಲ್ಲಿ ನಾಡಬಾಂಬ್ ಸ್ಫೋಟ; ಹಲವು ಮನೆಗಳಿಗೆ ಹಾನಿ