ಸುದ್ದಿಬಿಂದು ಬ್ಯೂರೋ ವರದಿ ಯಲ್ಲಾಪುರ
ಯಲ್ಲಾಪುರ ತಾಲೂಕಿನ ಗುಳ್ಳಾಪುರ 108 ಆಂಬುಲೆನ್ಸ್ ಸೇವೆಯಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ (EMT) ಸಿಬ್ಬಂದಿ ಕೊರತೆಯಿಂದ ತುರ್ತು ಆರೋಗ್ಯ ಸೇವೆ ವಿಳಂಬವಾಗುತ್ತಿದೆ ಎಂದು ಯಲ್ಲಾಪುರ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷರ,ಮಹೇಶ್ ಕೃಷ್ಣ ನಾಯ್ಕ್ ಆರೋಪಿಸಿದ್ದಾರೆ.
ಜೂನ್ 20ರಂದು ರಾತ್ರಿ ಸುಮಾರು 8 ಗಂಟೆಗೆ ಗುಳ್ಳಾಪುರ ಸಮೀಪ ಬೈಕ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ವೈದ್ಯಕೀಯ ನೆರವು ಅಗತ್ಯವಿದ್ದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಲಾಗಿತ್ತು. ಆದರೆ ಸೆಂಟ್ರಲ್ ಕಂಟ್ರೋಲ್ ರೂಮ್ನಿಂದ EMT ಸಿಬ್ಬಂದಿ ಹಾಗೂ ಮ್ಯಾನ್ಪವರ್ ಕೊರತೆಯಿಂದ ಸೇವೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಮಹೇಶ ನಾಯ್ಕ ತಿಳಿಸಿದ್ದಾರೆ.
ಬಳಿಕ ಜಿಲ್ಲಾ ಇಂಚಾರ್ಜ್ ಅವರಿಗೆ ವಿಷಯ ತಿಳಿಸಿದ ನಂತರ ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿತ್ತಾದರೂ, ಘಟನೆ ನಡೆದ ಸುಮಾರು ಒಂದೂವರೆ ಗಂಟೆಯ ನಂತರ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದೆ. ತುರ್ತು ಆರೋಗ್ಯ ಸೇವೆಯಲ್ಲಿ ಉಂಟಾದಾಗ ಈ ವಿಳಂಬದಿಂದ ಗಾಯಾಳುವಿನ ಚಿಕಿತ್ಸೆಗೆ ತೊಂದರೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಅಸಮಾಧಾನ ಉಂಟಾಗಿದೆ ಎಂದಿದ್ದಾರೆ.
ಇದೇ ವೇಳೆ, EMT ಅವರು ಜಿಲ್ಲಾ ಇಂಚಾರ್ಜ್ ಅವರ ಸೂಚನೆಗಳು ಹಾಗೂ ಸಾರ್ವಜನಿಕರ ಮನವಿಗಳಿಗೆ ಸಮರ್ಪಕವಾಗಿ ಸ್ಪಂದಿಸದೆ, ಮಾನವೀಯತೆ ಇಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪಿಸಿರುವ ಮಹೇಶ ನಾಯ್ಕ ಗುಳ್ಳಾಪುರ 108 ಆಂಬುಲೆನ್ಸ್ನಲ್ಲಿ EMT ಸಿಬ್ಬಂದಿ ಕೊರತೆ ಇರುವುದರಿಂದ, ರಾತ್ರಿ ವೇಳೆಯಲ್ಲಿ ಪೈಲೇಟ್ ಒಬ್ಬರೇ ವಾಹನ ಚಾಲನೆ ಮತ್ತು ರೋಗಿಯ ನಿರ್ವಹಣೆ ಎರಡನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ರೋಗಿಗಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ತುರ್ತು ಸೇವೆಯ ಗುಣಮಟ್ಟಕ್ಕೂ ಧಕ್ಕೆಯಾಗುತ್ತಿದೆ
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಗುಳ್ಳಾಪುರ 108 ಆಂಬುಲೆನ್ಸ್ಗೆ ಶಾಶ್ವತ EMT ಸಿಬ್ಬಂದಿಯನ್ನು ನೇಮಿಸಬೇಕು. ಜೊತೆಗೆ ಸಾರ್ವಜನಿಕರೊಂದಿಗೆ ಜವಾಬ್ದಾರಿಯುತ ಹಾಗೂ ಮಾನವೀಯತೆಯಿಂದ ವರ್ತಿಸುವ ಸಿಬ್ಬಂದಿಯನ್ನು ನಿಯೋಜಿಸಿ, ತುರ್ತು ಆರೋಗ್ಯ ಸೇವೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.



