ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬೆಟ್ಕುಳಿಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ದಿ. ನಾರಾಯಣ ಕುಸ್ಲಪ್ಪ ನಾಯ್ಕ ಅವರ ಸ್ಮರಣಾರ್ಥ ಅವರ ಮೊಮ್ಮಗ ಹಾಗೂ ವಕೀಲರಾದ ಪ್ರಶಾಂತ ನಾಯ್ಕ ಬೆಟ್ಕುಳಿ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದಿ. ನಾರಾಯಣ ನಾಯ್ಕ ಅವರ ಮಗನಾದ ಶಂಕರ್ ನಾಯ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಉಚಿತವಾಗಿ ಪಠ್ಯಪುಸ್ತಕಗಳನ್ನು ಒದಗಿಸುವ ಮೂಲಕ ಪ್ರಶಾಂತ ನಾಯ್ಕ ಅವರು ತಮ್ಮ ಅಜ್ಜನ ನೆನಪಿಗಾಗಿ ಅಪಾರ ಶಿಕ್ಷಣ ಪ್ರೇಮವನ್ನು ಮೆರೆದರು.ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಪ್ರದರ್ಶಿಸಿದ ಅವರು, ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದಕ್ಕೆ, ಅಡುಗೆ ಸಿಬ್ಬಂದಿಗೆ ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಗೆ ಹಣ್ಣಿನ ಕಸಿ ಗಿಡಗಳನ್ನು ವಿತರಿಸುವ ಮೂಲಕ ತಂದೆಯಾದ ಶಂಕರ ನಾಯ್ಕ ಅವರ ಮೂಲಕ ಪರಿಸರ ಪ್ರೇಮದ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ನಾರಾಯಣ ನಾಯ್ಕ ಅವರ ಪುತ್ರ ಹಾಗೂ ನಿವೃತ್ತ ಶಿಕ್ಷಕರಾದ ಶಂಕರ ನಾಯ್ಕ, ಮೊಮ್ಮಗ ಪ್ರವೀಣ, ಮರಿಮೊಮ್ಮಕ್ಕಳಾದ ಅಭಿನವ ಮತ್ತು ಅಶ್ವಿನ್ ಉಪಸ್ಥಿತರಿದ್ದರು.ಶಾಲೆಯ ಶಿಕ್ಷಕರಾದ ಐ.ಜೆ. ನಾಯ್ಕ, ಅನಿಲಾ ನಾಯಕ, ಎಸ್ಡಿಎಂಸಿ ಸದಸ್ಯರಾದ ಪ್ರಕಾಶ ಹರಿಕಾಂತ, ತಿಪ್ಪಯ್ಯ ಹರಿಕಾಂತ, ಜಯಂತ್ ಹರಿಕಾಂತ ಹಾಗೂ ಊರ ನಾಗರಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದನ್ನೂ ಓದಿ/ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮರು ಅರ್ಜಿ ಕಡ್ಡಾಯ : ರಾಜ್ಯ ಸರ್ಕಾರದಿಂದ ಮರುಪರಿಶೀಲನೆಗೆ ಸಿದ್ಧತೆ

