ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕೈಗಾ ಅಣುವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಸಂಬಂಧಿಸಿದ ಭಾರಿ ವಾಹನಗಳ ಅನಿಯಂತ್ರಿತ ಸಂಚಾರದಿಂದ ಸಾರ್ವಜನಿಕರಿಗೆ ಜೀವಭೀತಿ ಎದುರಾಗಿದ್ದು, ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ಲೇಖಕರಾದ ಶ್ರೀನಾಥ್ ಜೋಶಿ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರಿಗೆ ದೂರು ಸಲ್ಲಿಸಿದ್ದಾರೆ.

ಕಾರವಾರ-ಕೈಗಾ ರಸ್ತೆಯುದ್ದಕ್ಕೂ ಇರುವ ಹಳ್ಳಿಗಳ ಜನರ ಪರವಾಗಿ ಸಲ್ಲಿಸಲಾದ ದೂರಿನಲ್ಲಿ, ಕೈಗಾ ಯೋಜನೆಯ ಕಾಮಗಾರಿ ಆರಂಭವಾದ ಬಳಿಕ ಪರಿಸರ ಹಾಗೂ ಸಾರ್ವಜನಿಕರ ನೆಮ್ಮದಿ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಲಾಗಿದೆ.
ರಾತ್ರಿ ವೇಳೆ ಜಲ್ಲಿ, ಮರಳು ಹಾಗೂ ಎಂ-ಸ್ಯಾಂಡ್ ಸಾಗಿಸುವ ಡಂಪರ್‌ಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ತೆರಳುವ ಕಾರ್ಮಿಕರು, ರೈಲು ಪ್ರಯಾಣಿಕರು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಭಾಗದ ಜನರು ಹೈನುಗಾರಿಕೆಯನ್ನು ಅವಲಂಬಿಸಿರುವುದರಿಂದ ದನಕರುಗಳು ರಸ್ತೆಯ ಬಳಿ ಇರುವುದೇ ಸಾಮಾನ್ಯವಾಗಿದ್ದು, ಅತಿವೇಗದ ವಾಹನಗಳಿಂದ ಸಾಕುಪ್ರಾಣಿಗಳ ಜೀವಕ್ಕೂ ಅಪಾಯ ಎದುರಾಗಿದೆ. ಜೊತೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಚರಿಸುವ ಜಿಂಕೆ, ಚಿರತೆ, ಕಡವೆ ಹಾಗೂ ಇತರ ವನ್ಯಜೀವಿಗಳಿಗೂ ಅಪಾಯ ಉಂಟಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಗುಜರಾತ್‌ನಿಂದ ತರಲಾಗಿದ್ದ ಬೃಹತ್ ಯಂತ್ರ ಸಾಗಾಣಿಕೆ ವೇಳೆ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಂತಿಮವಾಗಿ ಕೈಗಾ ಯೋಜನಾ ಪ್ರದೇಶದ ಸಮೀಪವೇ ವಾಹನ ಉರುಳಿ ಬಿದ್ದ ಘಟನೆ ದೊಡ್ಡ ಆತಂಕ ಸೃಷ್ಟಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ವಿದ್ಯುತ್ ಲೈನ್ ತೆರವುಗೊಳಿಸಿದ್ದರಿಂದ ಹಲವಾರು ಗ್ರಾಮಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದ್ದು, ಮದುವೆ ಹಾಗೂ ಜಾತ್ರೆಗಳಿಗೂ ತೊಂದರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಭಾರಿ ವಾಹನಗಳ ಸಂಚಾರದಿಂದ ಕೆರವಡಿಯಿಂದ ಮಲ್ಲಾಪುರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮುಂಬರುವ ಮಳೆಗಾಲದಲ್ಲಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ. ಮುಖ್ಯ ರಸ್ತೆಯನ್ನು ಬಿಟ್ಟು ಸಕಲ್‌ವಾಡ-ಕರ್ಕಲ್ ಮಾರ್ಗದ ಒಳರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಡೆಯುತ್ತಿರುವುದರಿಂದ ಕಾಳಿ ನದಿಯ ಹಿನ್ನೀರಿಗೆ ನಿರ್ಮಿಸಲಾದ ಸೇತುವೆಗಳ ಸುರಕ್ಷತೆಗೂ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ. ಇದೇ ವೇಳೆ ವಾಹನಗಳಿಗೆ ಕಡ್ಡಾಯ ತೂಕ ಪರಿಶೀಲನೆ, ವೇಗ ನಿಯಂತ್ರಕ ಮತ್ತು ಜಿಪಿಎಸ್ ಅಳವಡಿಕೆ, ರಾತ್ರಿ ವೇಳೆ ಸಂಚಾರ ನಿರ್ಬಂಧ, ರಸ್ತೆ ಸುರಕ್ಷತಾ ಫಲಕ ಅಳವಡಿಕೆ, ಸೇತುವೆಗಳ ರಚನಾತ್ಮಕ ಸ್ಥಿರತೆ ಪರಿಶೀಲನೆ ಸೇರಿದಂತೆ ಹಲವು ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ.
ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗೆ ರಕ್ಷಣೆ ಒದಗಿಸದಿದ್ದಲ್ಲಿ ಸಿದ್ದರ ಹಾಗೂ ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ಶ್ರೀನಾಥ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ/ಮಹಿಳೆಯರ ಸ್ವಾವಲಂಬನೆಗೆ ರೋಟರಿ ನೆರವು ಶ್ಲಾಘನೀಯ : ಶಾಸಕ ಭೀಮಣ್ಣ ನಾಯ್ಕ