ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು :‌ಮಂಗಳೂರಿನಲ್ಲಿ  ಕಳೆದ‌ ಮೂರು ವರ್ಷಗಳ‌ ಹಿಂದೆ‌ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮೊಹಮ್ಮದ್ ಶಾರಿಕ್‌ಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಮೂಲಕ ಬಹುಕಾಲದಿಂದ ವಿಚಾರಣೆಯಲ್ಲಿದ್ದ ಪ್ರಕರಣಕ್ಕೆ ಮಹತ್ವದ ತೀರ್ಪು ಹೊರಬಿದ್ದಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿತ್ತು. ಘಟನೆಯ ವೇಳೆ ಆಟೋದಲ್ಲಿದ್ದ ಶಾರಿಕ್‌ ಬ್ಯಾಗ್‌ನೊಳಗೆ ಇಡಲಾಗಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದು, ತೀವ್ರ ಸ್ಫೋಟದಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತ್ತು.
ಪ್ರಾಥಮಿಕ ತನಿಖೆಯಲ್ಲಿ ಇದು ಸಾಮಾನ್ಯ ಅಪಘಾತವಲ್ಲದೆ, ದೇವಸ್ಥಾನ ಅಥವಾ ಜನಸಂದಣಿ ಹೆಚ್ಚಿರುವ ಪ್ರಮುಖ ಸ್ಥಳವನ್ನು ಗುರಿಯಾಗಿಸಿಕೊಂಡು ರೂಪಿಸಿದ ಸಂಚು ಎಂದು ತಿಳಿದುಬಂದಿತ್ತು.

ಆರಂಭದಲ್ಲಿ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ನಂತರ ಪ್ರಕರಣದ ಗಂಭೀರತೆಯನ್ನು ಗಮನಿಸಿ ರಾಷ್ಟ್ರೀಯ ತನಿಖಾ ದಳ (NIA)ಕ್ಕೆ ಹಸ್ತಾಂತರಿಸಲಾಯಿತು.
ಎನ್‌ಐಎ ತನಿಖೆಯಲ್ಲಿ ಶಾರಿಕ್‌ನ ಹಿಂದೆ ಕಾರ್ಯನಿರ್ವಹಿಸಿದ್ದ ಜಾಲ, ಹಣಕಾಸು ನೆರವು ನೀಡಿದವರು ಹಾಗೂ ಸಹಕರಿಸಿದ್ದ ಇತರ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಾਜ਼್ ಮುನೀರ್, ಸೈಯದ್ ಯಾಸಿನ್ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಶಾಲ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಒಟ್ಟು 16 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಇದೀಗ ಪ್ರಮುಖ ಆರೋಪಿಗೆ ಶಿಕ್ಷೆ ವಿಧಿಸಿರುವುದರಿಂದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಹಂತ ತಲುಪಿದಂತಾಗಿದೆ.

ಇದನ್ನೂ ಓದಿ/ಮರಕ್ಕೆ ಡಿಕ್ಕಿ ಹೊಡೆದ ಕಾರು : ಓರ್ವ ಗಂಭೀರ