ಸುದ್ದಿಬಿಂದು ಬ್ಯೂರೋ‌ ವರದಿ
ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕದಂಬಜಿಪುರಂ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾದ ಪ್ರಕರಣ ದುಃಖಾಂತ ಅಂತ್ಯ ಕಂಡಿದೆ. ಎರಡು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಚಂದ್ರದ್ರೋಣ ಬೆಟ್ಟದ ಮಾಣಿಕ್ಯಧಾರ ಜಲಪಾತದ ಸಮೀಪದ ಆಳವಾದ ಕಣಿವೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ ಮಂಗಳವಾರ (ಏಪ್ರಿಲ್ 7) ಸಂಜೆ ವೇಳೆಗೆ ಕಾಣೆಯಾಗಿದ್ದರು. ಫೋಟೋ ತೆಗೆಯುವ ಸಂದರ್ಭದಲ್ಲಿ ಅವರು ಹಠಾತ್ ನಾಪತ್ತೆಯಾಗಿದ್ದು, ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಹಲವು ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದ್ದರು. ಸುಮಾರು 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಹತ್ತು ತಂಡಗಳು ಭಾಗವಹಿಸಿದ್ದ ಶೋಧ ಕಾರ್ಯದಲ್ಲಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಸಿಬ್ಬಂದಿ, ಶ್ವಾನ ದಳ ಮತ್ತು ಡ್ರೋನ್‌ಗಳ ಸಹಾಯ ಪಡೆಯಲಾಗಿತ್ತು.

ಸುಮಾರು 240 ವಾಹನಗಳನ್ನು ಪರಿಶೀಲಿಸಿ ಅಪಹರಣದ ಶಂಕೆಯಲ್ಲಿಯೂ ತನಿಖೆ ನಡೆಸಲಾಗಿತ್ತು.ಇದೀಗ ಮಾಣಿಕ್ಯಧಾರ ಜಲಪಾತದ ಬಳಿಯ ಸುಮಾರು 2000 ಅಡಿ ಆಳದ ಕಣಿವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅದು ಶ್ರೀನಂದಾ ಅವರದ್ದೇ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪ್ರಾಥಮಿಕವಾಗಿ ವೀಕ್ಷಣಾ ಸ್ಥಳದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಎಸ್ಪಿ ಜೀತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

ಆದರೆ ಪ್ರಕರಣವನ್ನು ವಿವಿಧ ಕೋನಗಳಿಂದ ತನಿಖೆ ಮುಂದುವರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳವು ಬಾಲಕಿ ಕಾಣೆಯಾದ ಜಾಗದಿಂದ ಬಹಳ ದೂರದಲ್ಲಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಪ್ರದೇಶದಲ್ಲಿ ಮೊದಲೇ ಶೋಧ ಕಾರ್ಯ ನಡೆದಿದ್ದರೂ ಶವ ಸಿಗದಿರುವುದು ಕುಟುಂಬ ಸದಸ್ಯರಲ್ಲಿ ಅನುಮಾನ ಹುಟ್ಟಿಸಿದೆ.

ಇದೀಗ ಮೃತದೇಹವನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದ್ದು, ಕಣಿವೆಯ ಆಳ ಮತ್ತು ಭೂಪ್ರದೇಶದ ಸಂಕೀರ್ಣತೆಯಿಂದಾಗಿ ಕಾರ್ಯಾಚರಣೆ ಕಷ್ಟಕರವಾಗಿದೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.ಮಗಳ ಸಾವಿನ ಸುದ್ದಿ ತಿಳಿದ ಪೋಷಕರು ಮತ್ತು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ..

ಇದನ್ನೂ ಓದಿ/ವೃದ್ಧಾಪ್ಯ–ವಿಧವಾ ವೇತನಕ್ಕೆ ಕತ್ತರಿ? ಒಂದೇ ಕುಟುಂಬಕ್ಕೆ ಒಬ್ಬರಿಗಷ್ಟೇ ಅನುದಾನ ಸಾಧ್ಯತೆ | Karnataka Pension Update