ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಕಾಂಗ್ರೆಸ್ ಮುಖಂಡ ಹಾಗೂ ಗೃಹ ಸಚಿವರ ಆಪ್ತರಾಗಿದ್ದ ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ದುಷ್ಕರ್ಮಿಗಳಿಗೆ ಹಣ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂಕೋಲಾ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಎದುರು ಆರು ಮಂದಿ ಹಂತಕರ ಗುಂಪೊಂದು ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿಯಾಗಲು ಹೋಗಿ ಕಾರವಾರದ ಮಾಜಾಳಿ ಚೆಕ್ ಪೊಸ್ಟ್ ಬಳಿ ಅವರನ್ನ ಪೊಲೀಸರು ನಾಲ್ವರನ್ನ ಬಂಧಿದ್ದರು. ಹಲ್ಲೆಯ ಬಳಿಕ ಅವರು ವಾಸವಾಗಿದ್ದ ಹೊಟೇಲ್‌ಗೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ನಡೆದ ದಿನವೇ ಆ ವಿಡಿಯೋ ವೈರಲ್ ಆಗಿತ್ತು.

ಈ ವೇಳೆ ಹಂತಕರನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬ,ಕೃತ್ಯ ವಿಫಲವಾದ ಹಿನ್ನೆಲೆಯಲ್ಲಿ ಹಂತಕರನ್ನು ಕಳುಹಿಸಿದ್ದವರಿಗೆ ಕರೆ ಮಾಡಿ, “ನೀವು ಕಳಿಸಿದ ಜನ ಸರಿಯಾಗಿಲ್ಲ, ಕೆಲಸ ಸರಿಯಾಗಿ ಮಾಡಿಲ್ಲ, ಎಂಥವರನ್ನು ಕಳಹಿಸಿದ್ದೀಯಾ?” ಎಂದು ಬೈದಿರುವ ಆಡಿಯೋ ಕೂಡ ವೈರಲ್ ಆಗಿತ್ತು.

ಇದಾದ ಬಳಿಕ ಇದೀಗ, ಹತ್ಯೆ ಮಾಡಲು ಬಂದಿದ್ದ ದುಷ್ಕರ್ಮಿಗಳಿಗೆ ಹಂತಕರನ್ನು ಕರೆದುಕೊಂಡು ಬಂದಿದ್ದ ಹಾಗೂ ಪೊಲೀಸರಿಂದ ತಪ್ಪಿಸಿಕೊಂಡಿರುವ, ಆ ಹಂತಕರಿಗೆ ಹಣ ನೀಡುತ್ತಿರುವ ವಿಡಿಯೋ ಸಹ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಬೆಳವಣಿಗೆಗಳನ್ನು ಗಮನಿಸಿದರೆ, ಗೋಪಾಲಕೃಷ್ಣ ನಾಯಕ ಅವರನ್ನು ಹತ್ಯೆ ಮಾಡಲು ಸೂಪಾರಿ ನೀಡಲಾಗಿದ್ದೇ ಎಂಬ ಅನುಮಾನ ಬಲವಾಗುತ್ತಿದೆ. ಇದು ಪೊಲೀಸ್ ತನಿಖೆಗೆ ಮತ್ತಷ್ಟು ಸಹಕಾರಿ ಆಗಲಿದೆ.