ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಇಲ್ಲಿನ ಹನುಮಾನ ನಗರದಲ್ಲಿ ನಡೆದ ಸಚಿನ್ ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂದೀಪ್ ಶೇಟ್ ಮಾಲಿಕತ್ವದ ಗೋಲ್ಡನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಐಪಿಎಲ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯ ರೋಮಾಂಚಕಾರಿ ಅಂತಿಮ ಪಂದ್ಯದಲ್ಲಿ ಗುರು ನಾಯ್ಕ ಮಾಲಿಕತ್ವದ ಕಿಟ್ಟ ಇಲೆವೆಲ್ ತಂಡ ನಾಲ್ಕು ಹುದ್ದರಿ ಕಳೆದುಕೊಂಡು 8 ಓವರುಗಳಿಗೆ ನೀಡಿದ 86 ರನ್ನುಗಳ ಗುರಿಯನ್ನು ಕೇವಲ ಒಂದು ಎಸೆತ ಬಾಕಿಯಿರುವಾಗ ತಲುಪಿದ ಗೋಲ್ಡನ್ ಸ್ಟಾರ್ ತಂಡ ಮೂರು ವಿಕೆಟ್ ಕಳೆದುಕೊಂಡು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು.

ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡದ ಗೆಲುವಿಗೆ ಕಾರಣರಾದ ಅಭಿಷೇಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯ ಆರಂಭಕ್ಕೂ ಮುನ್ನ ಹಿರಿಯ ಪತ್ರಕರ್ತ ವಿವೇಕ ಮಹಾಲೆ ಟಾಸ್ ನಡೆಸಿಕೊಟ್ಟರು. ಟಾಸ್ ಗೆದ್ದ ಗೋಲ್ಡನ್ ಸ್ಟಾರ್ ತಂಡದ ನಾಯಕ ಫೀಲ್ಡಿಂಗ್ ಆಯ್ದುಕೊಂಡರು. ಇದಕ್ಕೂ ಮೊದಲು ನಡೆದ ಮೊದಲ ಉಪಾಂತ್ಯದಲ್ಲಿ ಕಿಟ್ಟ ಬಾಯ್ಸ್ ತಂಡ ಅತಿಥೇಯ ನೇತಾಜಿ ಸ್ಪೋಟ್ಸ್ ಕ್ಲಬ್ ತಂಡವನ್ನು ಮಣಿಸಿದರೆ, ಎರಡನೇ ಉಪಾಂತ್ಯದಲ್ಲಿ ಚತುರ್ವಿ ತಂಡದ ವಿರುದ್ಧ ಗೋಲ್ಡನ್ ಸ್ಟಾರ್ ತಂಡ ಗೆಲುವಿ ಸಾಧಿಸಿ ಅಂತಿಮ ಪಂದ್ಯಕ್ಕೆ ತಲುಪಿತು.

ನೇತಾಜಿ ಸ್ಪೋರ್ಟ್ಸ ಕ್ಲಬ್ಬಿನ ಹಿರಿಯ ಸದಸ್ಯರಾಗಿದ್ದ ದಿ ಸಚಿನ್ ಮಹಾಲೆ ಸ್ಮರಣಾರ್ಥ ನಡೆದಿದ್ದ ಎರಡು ದಿನಗಳ ಈ ಪಂದ್ಯದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಮೊದಲ ದಿನ ತಲಾ ಮೂರು ತಂಡಗಳ ಎರಡು ಗುಂಪುಗಳಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆದವು. ಗ್ರುಪ್ ಎ ತಂಡದಲ್ಲಿ ಚತುರ್ವಿ, ಕಿಟ್ಟ ಬಾಯ್ಸ್ ಮತ್ತು ವೆಂಕಟೇಶ್ವರ ಲೆಜೆಂಡ್ಸ್ ಇದ್ದರೆ, ಗ್ರುಪ್ ಬಿ ತಂಡದಲ್ಲಿ ಗೋಲ್ಡನ್ ಸ್ಟಾರ್, ನೇತಾಜಿ ಸ್ಪೋಟ್ಸ್ ಕ್ಲಬ್ ಮತ್ತು ಸಿದ್ದಿವಿನಾಯಕ ತಂಡಗಳು ಪರಸ್ಪರ ಸೆಣಸಾಡಿದವು. ಎರಡನೇ ದಿನ ಮೊದಲ ಉಪಾಂತ್ಯ ಪಂದ್ಯದಲ್ಲಿ ಗ್ರುಪ್ ಎ ತಂಡದ ಟಾಪರ್ ಕಿಟ್ಟ ಬಾಯ್ಸ್ ಗ್ರುಪ್ ಬಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹೋರಾಡಿದರೆ,

ಎರಡನೇ ಉಪಾಂತ್ಯದಲ್ಲಿ ಗ್ರುಪ್ ಬಿ ಟಾಪರ್ ಗೋಲ್ಡನ್ ಸ್ಟಾರ್ ಮತ್ತು ಗ್ರುಪ್ ಎ ದ್ವಿತೀಯ ಸ್ಥಾನಿ ಚತುರ್ವಿ ನಡುವೆ ಸೆಣಸಾಟ ನಡೆಯಿತು.ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದ ಉದ್ಘಾಟಕರಾಗಿದ್ದ ಹಿರಿಯ ಪತ್ರಕರ್ತ ವಿವೇಕ ಮಹಾಲೆ ಮಾತನಾಡಿ, `ಮಾದರಿ ಪಂದ್ಯಾವಳಿ ಸಂಘಟಿಸುವ ಮೂಲಕ ಸಚಿನ್ ಮಹಾಲೆಯವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಲಾಗಿದೆ’ ಎಂದು ಹೇಳಿದರು.

ಅತಿಥಿಗಳಾದ ಮಡಿವಾಳ ಸಮಾಜದ ಮುಖಂಡ ರಘುರಾಮ ಮಡಿವಾಳ ಮತ್ತು ನಾಮಧಾರಿ ಸಮಾಜದ ಮುಖಂಡ ಕೃಷ್ಣ ನಾಯ್ಕ ಮಾತನಾಡಿ, ಊರಿನ ಒಗ್ಗಟ್ಟು ನಿರಂತರವಾಗಿರಲಿ ಎಂದು ಆಶಿಸಿದರು. ನೇತಾಜಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಶಿವಾನಂದ ಮಹಾಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಹಾಲೆ ಸಮಾಜದ ಅಧ್ಯಕ್ಷ ರಾಜೇಶ ಜಿ ಮಹಾಲೆ, ಹನುಮಾನ ನಗರ ಶಾಲೆಯ ಅಧ್ಯಕ್ಷ ಈಶ್ವರ ಡಿ ನಾಯ್ಕ, ದೈವಜ್ಞ ಸಮಾಜದ ಮುಖಂಡ ಸದಾನಂದ ರಾಯ್ಕರ ವೇದಿಕೆಯಲ್ಲಿದ್ದರು.

ಚಾಂಪಿಯನ್ ಗೋಲ್ಡನ್ ಸ್ಟಾರ್ ತಂಡಕ್ಕೆ 22 ಸಾವಿರ ರೂ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಪಡೆದರೆ, ರನ್ನರ್ ಅಪ್ ಕಿಟ್ಟ ಬಾಯ್ಸ್ ತಂಡಕ್ಕೆ 11 ಸಾವಿರ ರೂ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ಅತಿಥಿಗಳು ವಿತರಿಸಿದರು. ಪಂದ್ಯಾವಳಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಕಿಟ್ಟ ಬಾಯ್ಸ್ ತಂಡದ ಸಚಿನ್ ನಾಯ್ಕ ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ್ದಕ್ಕೆ ಆರೆಂಜ್ ಕ್ಯಾಪ್ ಪಡೆದರು. ಅತಿ ಹೆಚ್ಚು ವಿಕೆಟ್ ಪಡೆದ ಕಿಟ್ಟ ಬಾಯ್ಸ್ ತಂಡದ ಕಿಟ್ಟ ಪರ್ಪಲ್ ಕ್ಯಾಪ್ ಪಡೆದರು.

ಇದನ್ನೂ ಓದಿ/ಕರ್ತವ್ಯದ ಒತ್ತಡಕ್ಕೆ ಸಿಲುಕಿದ ಪೊಲೀಸರು : ವಾರದ ರಜೆ ಸಿಗದೇ ಕಣ್ಣೀರು