ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ : ಮುಂಡಗೋಡ ಹಾಗೂ ಕಲಘಟಗಿ ರಸ್ತೆ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರೀ ಮಳೆ ಆಲಿಕಲ್ಲು ಸುರಿಮಳೆಯಾಗಿ ಮಾರ್ಪಟ್ಟು, ಎಲ್ಲೆಡೆ ಬಿಳಿ ಹಾಸಿನಂತೆ ಆವರಿಸಿ ಜನಜೀವನಕ್ಕೆ ತೊಂದರೆ ಉಂಟಾಗಿದ್ದು, ರಸ್ತೆಗಳಲ್ಲಿ ಬಸ್ ಸೇರಿದಂತೆ ವಾಹನ ಸಂಚಾರಿಸಲಾಗದೆ ಪರಿದಾಡಬೇಕಾದ‌ ಪರಿಸ್ಥಿತಿ ಉಂಟಾಗಿಯಿತು‌

ಮುಂಡಗೋಡ ಹಾಗೂ ಕಲಘಟಗಿ ಭಾಗದಲ್ಲಿ ಎಡೆಬಿಡದೆ ಮಳೆ‌‌ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಳಿಸಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ವೇಳೆಗೆ ಏಕಾಏಕಿ ಗುಡುಗು ಮಿಂಚಿನೊಂದಿಗೆ ಆರಂಭವಾದ ಮಳೆ ಮುಂಡಗೋಡ, ಕಲಘಟಗಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿ ಮಾರ್ಪಟ್ಟಿತು. ಕೆಲವೇ ಕ್ಷಣಗಳಲ್ಲಿ ರಸ್ತೆ, ಹಾಗೂ ಹೊಲಗಳಲ್ಲಿ ಆಲಿಕಲ್ಲುಗಳು ಹರಡಿ ಬಿಳಿ ಹಾಸಿನಂತೆ ಕಾಣಿಸಿಕೊಂಡಿತ್ತು. ಅಕಾಲಿಕ ಮಳೆಯ ಪರಿಣಾಮವಾಗಿ ತೋಟಗಳಿಗೆ ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಿ‌ ಉಂಟಾಗಿದೆ. ಈಗಾಗಲೇ ಕಟಾವು ಹಂತದಲ್ಲಿದ್ದ ಬೆಳೆಗಳು ಹಾನಿಗೊಳಗಾಗಿದ್ದು, ರೈತರಲ್ಲಿ ಆತಂಕ‌‌ ಮೂಡಿಸಿದೆ.

ಮಳೆಯ ತೀವ್ರತೆಗೆ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಸಾರ್ವಜನಿಕರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳಡಿ ಆಶ್ರಯ ಪಡೆಯಬೇಕಾಯಿತು. ಇನ್ನು ಯುಗಾದಿ ಹಾಗೂ ರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ಚಟುವಟಿಕೆಗಳು ಜೋರಾಗಬೇಕಿದ್ದ ಸಂದರ್ಭದಲ್ಲಿ ಮಳೆಯ ಅಬ್ಬರದಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.

ಹವಾಮಾನ ಇಲಾಖೆ ಮುಂದಿನ ಎರಡು ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ/ಕಾಂಗ್ರೆಸ್‌ಗೆ ‘ನೋ’ ಹೇಳಿದ ದಿನಕರ್ ಶೆಟ್ಟಿ, ಭುವನ್ ಭಾಗವತ್‌ ವಿರುದ್ಧ ಟೀಕೆ