ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ :ಬಂಗಾರದ ಆಸೆ ಎಷ್ಟರ ಮಟ್ಟಿಗೆ ಮಾನವೀಯತೆಯನ್ನೇ ಮರೆಸಿಸುತ್ತದೆ ಎಂಬುದಕ್ಕೆ ಮುಂಡಗೋಡ ತಾಲೂಕಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೇ ಸಾಕ್ಷಿಯಾಗಿದೆ. ವೃದ್ಧ ಮಹಿಳೆಯ ಮೈಮೇಲೆ ಇದ್ದ ಬಂಗಾರದ ಆಭರಣಗಳ ಮೇಲೆ ಕಣ್ಣುಹಾಕಿದ ದುರುಳನೊಬ್ಬ ಆಕೆಯನ್ನು ಕೊಲೆ ಮಾಡಿ ತಲೆ ಕಡಿದು ಶವವನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳಗಿ ಗ್ರಾಮದ ಕೊಳಗಿ ಅರಣ್ಯ ಪ್ರದೇಶದಲ್ಲಿ ಸುಮಾರು ಹತ್ತು ದಿನಗಳ ಹಿಂದೆ ತಲೆ ಇಲ್ಲದ, ಬೆತ್ತಲೆಯ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಶವದ ತಲೆ ಪತ್ತೆಯಾಗದ ಕಾರಣ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಶಂಕೆಯೂ ಮೂಡಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಮೊದಲಿಗೆ ಮೃತ ಮಹಿಳೆ ಯಾರು ಎಂಬುದನ್ನು ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾದರು. ಈ ವೇಳೆ ಕೊಲೆಯಾದ ಮಹಿಳೆ ಮಳಗಿ ಗ್ರಾಮದ 75ವರ್ಷದ ಶಿವಕ್ಕ ಪಾಟೀಲ ಎಂಬುದು ಗೊತ್ತಾಗಿದೆ.
ಈ ವೃದ್ಧೆ ಕೆಲವು ದಿನಗಳಿಂದ ನಾಪತ್ತೆಯಾಗಿರುವುದು ತಿಳಿದುಬಂದಿತು. ಮಹಿಳೆಯ ಮಕ್ಕಳು ಬೇರೆ ಊರಿನಲ್ಲಿ ವಾಸವಾಗಿದ್ದು, ಶಿವಕ್ಕ ಪಾಟೀಲ ತಮ್ಮ ಗ್ರಾಮದಲ್ಲೇ ಸಣ್ಣ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು.
ಪೊಲೀಸರು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಇರಿಸಿದ್ದ ಶವವನ್ನು ಮಕ್ಕಳಿಗೆ ತೋರಿಸಿದಾಗ ಅದು ತಮ್ಮ ತಾಯಿಯದ್ದೇ ಎಂದು ಗುರುತಿಸಿದ್ದರು. ನಂತರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದರು.
ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಮಹತ್ವದ ಸುಳಿವು ನೀಡಿದವು. ಶಿವಕ್ಕ ಪಾಟೀಲ ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಬೈಕ್ನಲ್ಲಿ ಹೋಗುತ್ತಿರುವ ದೃಶ್ಯಗಳು ಪತ್ತೆಯಾಗಿದ್ದವು. ಇನ್ನಷ್ಟು ಪರಿಶೀಲನೆ ನಡೆಸಿದಾಗ ಆ ಬೈಕ್ ಮೃತ ಮಹಿಳೆಯ ಮನೆಯ ಎದುರಿನ ಮನೆಯ ವ್ಯಕ್ತಿಯದ್ದೇ ಎಂಬುದು ತಿಳಿದುಬಂತು.
ಈ ಹಿನ್ನೆಲೆಯಲ್ಲಿ ಅನುಮಾನಿತನಾಗಿದ್ದ ಕೃಷ್ಣ ಎಂಬ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಆರೋಪಿಯು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಕೃಷ್ಣ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನಾಗಿದ್ದು, ಮಳಗಿಯಲ್ಲಿ ವಾಸಿಸುವ ಯುವತಿಯನ್ನು ಮದುವೆಯಾಗಿದ್ದನು. ಆಗಾಗ್ಗೆ ಹೆಂಡತಿಯ ಮನೆಗೆ ಬರುವಾಗ ಶಿವಕ್ಕ ಪಾಟೀಲ ಅವರ ಮೈಮೇಲೆ ಇದ್ದ ಬಂಗಾರದ ಆಭರಣಗಳನ್ನು ಗಮನಿಸಿದ್ದ. ಬಳಿಕ ವೃದ್ಧೆಯನ್ನು ನಂಬಿಸಿ “ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ.
ಮಳಗಿಯ ಕೊಳಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ಕೊಲೆ ಮಾಡಿ ತಲೆ ಕಡಿದು ಶವವನ್ನು ಬಿಸಾಡಿದ್ದಾನೆ. ಬಳಿಕ ಬಟ್ಟೆಗಳನ್ನು ಸುಟ್ಟುಹಾಕಿ, ಕಡಿದ ತಲೆಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಮನಹಳ್ಳಿ ಬಳಿ ಇರುವ ಜಮೀನಿನಲ್ಲಿ ಸುಟ್ಟುಹಾಕಿರುವುದಾಗಿ ಆರೋಪಿಯು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಅಲ್ಪ ಪ್ರಮಾಣದ ಬಂಗಾರದ ಆಸೆಗೆ ವೃದ್ಧ ಮಹಿಳೆಯನ್ನು ಈ ರೀತಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ/ಇಂಧನ ಕೊರತೆ ಭೀತಿ: ದಾಂಡೇಲಿಯಲ್ಲಿ ಬಾಟಲಿ-ಕ್ಯಾನ್ಗಳಲ್ಲಿ ಪೆಟ್ರೋಲ್ ಸಂಗ್ರಹಿಸುತ್ತಿರುವ ಜನ

