ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಮದಲ್ಲಿ ಪಡ್ತಿ ಸಮಾಜದವರಿಂದ ಎಂಟು ವರ್ಷಕ್ಕೊಮ್ಮೆ ನಡೆಯುವ ಸುಗ್ಗಿ ಕುಣಿತ ಈ ಬಾರಿ ವಿಜೃಂಭಣೆಯಿಂದ ಆರಂಭಗೊಂಡಿದೆ. ಕರಾವಳಿ ಭಾಗದ ಹೋಳಿ ಹಬ್ಬವು ಭಕ್ತಿ ಹಾಗೂ ಜನಪದ ಸಂಪ್ರದಾಯಗಳ ಸಂಗಮವಾಗಿದ್ದು, ಸುಗ್ಗಿ ಕುಣಿತ ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುವಂತಾಗಿದೆ..
ಗ್ರಾಮದ ದೇವರ ಸನ್ನಿಧಿಯಲ್ಲಿ ಹೋಳಿ ಹುಣ್ಣಿಮೆಗೆ ಒಂಬತ್ತು ದಿನಗಳ ಮುನ್ನ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಕುಣಿತಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸಂಕಲ್ಪ, ಸಮೂಹ ಪ್ರಾರ್ಥನೆ ಹಾಗೂ ವಿಧಿವಿಧಾನಗಳ ನಂತರ ತುರಾಯಿ, ಚಂಡೆ, ತಾಳಗಳ ನಾದದಲ್ಲಿ ಮೇಳ ಆರಂಭವಾಯಿತು. ಸುಗ್ಗಿಕುಣಿತ ಪ್ರಾರಂಭವಾದ ಬಳಿಕ ಭಾಗವಹಿಸುವವರು ಮನೆಗೆ ತೆರಳದೆ, ನಿಯಮ-ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಗ್ರಾಮದೆಲ್ಲೆಡೆ ಮನೆಮನೆಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ ಮಾಡುತ್ತಾರೆ.
ಪ್ರತಿ ಮನೆಯ ಕನಿಷ್ಠ ಒಬ್ಬರಂತೆ ಈ ಸುಗ್ಗಿಕುಣಿತದಲ್ಲಿ ಪಾಲ್ಗೊಳ್ಳುವುದ ವಿಶೇಷ. ಈ ಬಾರಿ ಒಟ್ಟು 21 ತುರಾಯಿಗಳು ಭಾಗವಹಿಸಿರುವುದು ಜಿಲ್ಲೆಯಲ್ಲಿ ಅಪರೂಪವೆನಿಸುವಷ್ಟು ದೊಡ್ಡ ಪ್ರಮಾಣದ ಆಚರಣೆಯಾಗಿದೆ. ಪ್ರತಿಯೊಂದು ತುರಾಯಿಗೂ ಅಂದಾಜು 20ರಿಂದ 30 ಸಾವಿರ ರೂ. ವೆಚ್ಚವಾಗುತ್ತಿದ್ದು, ಒಟ್ಟು ಲಕ್ಷಾಂತರ ರೂಪಾಯಿಗಳನ್ನು ಸಮಾಜದವರು ಸ್ವಂತವಾಗಿ ಭರಿಸುತ್ತಿದ್ದಾರೆ.
ಯಾವುದೇ ಹೊರಗಿನ ಅನುದಾನವಿಲ್ಲದೆ ತಮ್ಮದೇ ಸಂಪನ್ಮೂಲಗಳಿಂದ ಸುಗ್ಗಿಕುಣಿತ ನಡೆಸುತ್ತಿರುವುದು ಗ್ರಾಮಸ್ಥರ ಭಕ್ತಿ ಹಾಗೂ ಸಂಸ್ಕೃತಿ ಪ್ರೇಮಕ್ಕೆ ಸಾಕ್ಷಿಯಾಗಿದೆ. ತುರಾಯಿ, ಚಂಡೆ, ತಾಳಗಳ ನಾದದಲ್ಲಿ ಕುಣಿಯುವ ಕಲಾವಿದರು ಗ್ರಾಮದಲ್ಲಿ ಭಕ್ತಿ ಮಯ ವಾತಾವರಣ ನಿರ್ಮಿಸುತ್ತಿದ್ದಾರೆ.
ಮೇಳದ ಅವಧಿಯಲ್ಲಿ ಪಾಲ್ಗೊಳ್ಳುವವರು ಶುದ್ಧಾಚಾರ, ಪರಸ್ಪರ ಸಹಕಾರ ಹಾಗೂ ಶಿಸ್ತು ಪಾಲನೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಪೀಳಿಗೆ ಉತ್ಸಾಹದಿಂದ ಭಾಗವಹಿಸುವ ಮೂಲಕ ಈ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುತ್ತಿದ್ದಾರೆ.
ದೂರದ ಊರುಗಳಲ್ಲಿ ವಾಸಿಸುವ ಗ್ರಾಮಸ್ಥರೂ ಸಹ ಈ ಸಂದರ್ಭದಲ್ಲಿ ಊರಿಗೆ ಮರಳಿ ಬಂದು ಸುಗ್ಗಿಕುಣಿತದಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಸುಗ್ಗಿಕುಣಿತದ ಮೂಲಕ ಗ್ರಾಮದಲ್ಲಿ ಬಾಂಧವ್ಯ, ಸಹಕಾರ ಮತ್ತು ಧಾರ್ಮಿಕ ಶ್ರದ್ಧೆ ಇನ್ನಷ್ಟು ಬಲವಾಗುತ್ತಿದೆ.
ಇದನ್ನೂ ಓದಿ/ಭಟ್ಕಳವನ್ನು ಬಾಂಗ್ಲಾ ಮಾಡಲು ಹೊರಟಿದೆಯೇ ಕಾಂಗ್ರೆಸ್ ..? ಅನಂತಮೂರ್ತಿ ಹೆಗಡೆ


