ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಬಿಜೆಪಿಗೆ ಮರಳಲಿದ್ದಾರೆ ಎನ್ನುವ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ಅವರು ಯಾವತ್ತೂ ನಮ್ಮ ಜೊತೆಯಲ್ಲೇ ಇದ್ದಾರೆ. ಪಕ್ಷದಿಂದ ಅವರು ದೂರವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.ಕಾರವಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ

ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದ ಹಿನ್ನೆಲೆಯಲ್ಲಿ  ಪಕ್ಷದ ಚಟುವಟಿಕೆಗಳಿಂದ ಕೆಲಕಾಲ ದೂರ ಉಳಿದಿದ್ದರು. ಆದರೆ ಇದೀಗ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕುರಿತಂತೆ ಸ್ಪಷ್ಟತೆ ನೀಡಿದ ಕಾಗೇರಿ, ಪಕ್ಷದೊಳಗಿನ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಕುರಿತು ತೀವ್ರ ಟೀಕೆ ನಡೆಸಿದ ಕಾಗೇರಿ, “ರಾಜ್ಯದ ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರದ ಕಚ್ಚಾಟದಿಂದ ಆಡಳಿತವೇ ಕುಸಿದು ಹೋಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಭ್ರಷ್ಟಾಚಾರ ಹೆಚ್ಚಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ” ಎಂದು ಆರೋಪಿಸಿದರು.

“ಖುರ್ಚಿ ಕಚ್ಚಾಟ ಬಿಟ್ಟು ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ನೀಡಬೇಕು” ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ/ಯಶಸ್ವಿ ಎರಡು ವರ್ಷ ಪೂರೈಸಿದ ನಿಮ್ಮ “ಸುದ್ದಿ ಬಿಂದು” : ಲಕ್ಷಾಂತರ ಓದುಗರ ವಿಶ್ವಾಸದೊಂದಿಗೆ ಮನೆ ಮಾತಾದ ವೆಬ್ ನ್ಯೂಸ್