ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಪ್ರಯುಕ್ತ “ಆನ್‌ಲೈನ್‌ನಲ್ಲಿ ಹಣ ಪಾವತಿಸಿ ದೇವಿಯ ಉಡಿ ತುಂಬುವ ಸೇವೆ ಹಾಗೂ ಪ್ರಸಾದ ಪಡೆಯಿರಿ” ಎಂಬ ಹೆಸರಿನಲ್ಲಿ ಹರಿದಾಡುತ್ತಿರುವ AI ಆಧಾರಿತ ನಕಲಿ ವಿಡಿಯೋ ಜಾಹೀರಾತಿನ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಶಿರಸಿ ಶ್ರೀ ಮಾರಿಕಾಂಬ ದೇವಿ ದೇವಸ್ಥಾನ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳು ಸಂಪೂರ್ಣವಾಗಿ ನಕಲಿಯಾಗಿದ್ದು, ಭಕ್ತರನ್ನು ಮೋಸಗೊಳಿಸುವ ಉದ್ದೇಶ ಹೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಜಾಹೀರಾತುಗಳ ಹಿಂದಿರುವ ವ್ಯಕ್ತಿಗಳು ಹಾಗೂ ಜಾಲವನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ.‌ಪೊಲೀಸರು ತಿಳಿಸಿದಂತೆ, ದೇವಸ್ಥಾನದ ವತಿಯಿಂದ ಆನ್‌ಲೈನ್ ಮೂಲಕ ಹಣ ಪಾವತಿಸಿ “ಉಡಿ ತುಂಬುವ ಸೇವೆ” ಅಥವಾ “ಪ್ರಸಾದ ವಿತರಣೆ” ಮಾಡುವ ಯಾವುದೇ ಅಧಿಕೃತ ವ್ಯವಸ್ಥೆ ಇಲ್ಲ. ಇಂತಹ ಲಿಂಕ್‌ಗಳು, ಕ್ಯೂಆರ್ ಕೋಡ್‌ಗಳು ಅಥವಾ ವಿಡಿಯೋಗಳಿಗೆ ಸ್ಪಂದಿಸದೆ, ಹಣ ವರ್ಗಾವಣೆ ಮಾಡಬಾರದು ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಾಗಿ ಮನವಿ ಮಾಡಿದ್ದಾರೆ.

ನಕಲಿ ಜಾಹೀರಾತುಗಳಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ ವಹಿಸಬೇಕು. ಸಂಶಯಾಸ್ಪದ ವಿಡಿಯೋಗಳು, ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಸೈಬರ್ ಅಪರಾಧ ವಿಭಾಗಕ್ಕೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ /ಬೈಲೂರಿನಲ್ಲಿ ಮನೆಗಳ ಮೇಲೆ ಕಲ್ಲೂತೂರಿದ ಅನ್ಯಕೋಮಿನ ಅಪ್ರಾಪ್ತ ಬಾಲಕರು