ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆಬ್ರವರಿ 15ರಂದು ಭಾನುವಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ ಸಮಿತಿ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಮಹಾ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಮಹಾ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ಸಂಜೆ 6 ಗಂಟೆಗೆ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ “ಮಹಾ ದೀಪೋತ್ಸವ” ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು ಹತ್ತು ಸಾವಿರ ದೀಪಗಳನ್ನು ಹಚ್ಚಲು ವ್ಯವಸ್ಥೆ ಮಾಡಲಾಗಿದೆ. ನಂತರ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಶಿವರಾತ್ರಿ ಜಾಗರಣೆ ಅಂಗವಾಗಿ ರಾತ್ರಿ 10 ಗಂಟೆಯಿಂದ ರಾಜ್ಯದ ಪ್ರಸಿದ್ಧ ನೃತ್ಯ ತಂಡ ಪಾಯಿಂಟ್ ಔಟ್ ಡಾನ್ಸ್ ಕ್ರ್ಯೂ ಹಾಗೂ BL Events ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಲೆನಾಡಿನ ಖ್ಯಾತ ಗಾಯಕರಾದ ಸಂತೋಷ ಆಚಾರ್ಯ, ರಮ್ಯಾ (ಶಿರಸಿ), ಸುಂದರ (ಶಿರಸಿ) ಭಾಗವಹಿಸಲಿದ್ದು, ಕರಾವಳಿಯ ಯುವ ನಿರೂಪಕ ಬಿ.ಎಲ್. ಶ್ರೀಜನ ಕಾರ್ಯಕ್ರಮ ನಿರೂಪಿಸಲಿದ್ದಾರೆ.




