ಸುದ್ದಿಬಿಂದು ಬ್ಯೂರೋ ವರದಿ
ಚಿತ್ರದುರ್ಗ: ತಾಲೂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದಂಡಿನ ಕುರುಬರಹಟ್ಟಿ ಮುಖ್ಯ ಶಿಕ್ಷಕಿ ಡಾ. ಬಿ ಟಿ ಲೋಲಾಕ್ಷಮ್ಮ ಅವರಿಗೆ ಆಂಧ್ರಪ್ರದೇಶದ ಗುರು ಚೈತನ್ಯ ಉಪಾಧ್ಯಾಯರ ಸಂಘ ವಿಜಯವಾಡ ಇಲ್ಲಿ 3 ಜನವರಿ 2026 ರಂದು “ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪ್ರಧಾನ ಮಾಡಲಾಗುತ್ತದೆ.
ಚಿತ್ರದುರ್ಗ ತಾಲೂಕಿನ ಪ್ರಥಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಶಿಕ್ಷಕರ ಪರವಾಗಿ ಸದಾ ಧ್ವನಿ ಎತ್ತಿ ಎಲ್ಲಾ ಶಿಕ್ಷಕರ ಪರ ಸಂಘಟನೆಯಲ್ಲಿ ಮುಂಚೂಣಿಯಾಗಿ ಕಾರ್ಯನಿರ್ವಹಿಸಿ ಶಿಕ್ಷಕರ ಏಳಿಗೆಗಾಗಿ ಶ್ರಮಿಸಿದ್ದಾರೆ.
28 ವರ್ಷಗಳಿಂದ ಗ್ರಾಮೀಣ ಪ್ರದೇಶದ ಶಿಕ್ಷಕಿಯಾಗಿ ಮುಖ್ಯ ಶಿಕ್ಷಕಿಯಾಗಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪಠ್ಯ ಪುಸ್ತಕಗಳ ಪರಿಷ್ಕರಣ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇವರು ಕೇವಲ ಶಿಕ್ಷಕಿಯಷ್ಟೇ ಅಲ್ಲ ಸಾಹಿತಿಯಾಗಿ, ಗಾಂಧಿ ತತ್ವಗಳ ಚಿಂತಕರಾಗಿ ರಾಜ್ಯ ಮಟ್ಟದ ಕ್ರೀಡಾಪಟುವಾಗಿ ಜಾನಪದ ಕಲಾವಿದರಾಗಿ ರಾಜ್ಯಮಟ್ಟದ ವಿರಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ತಮ್ಮ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ ದಾನಿಗಳ ನೆರವಿನಿಂದ ವಿಜ್ಞಾನ ಪ್ರಯೋಗಾಲಯ ಗಣಿತ ಪ್ರಯೋಗಾಲಯ ರೋಟಿ ಕ್ಲಬ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಉಚಿತ ಎಲ್ ಕೆ ಜಿ ಯು ಕೆ ಜಿ ತರಗತಿಗಳು ಭೋಜನಾಲಯ ಸಮವಸ್ತ್ರ ಉಚಿತ ಕಂಪ್ಯೂಟರ್ ಶಿಕ್ಷಣ ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿ ಅತ್ಯುತ್ತಮವಾದ ವಾಚನಾಲಯ ಹೀಗೆ ವಿವಿಧ ರೀತಿಯ ಸೌಲಭ್ಯಗಳನ್ನು ಶಾಲೆಗೆ ಕಲ್ಪಿಸಿ ಮಾದರಿ ಶಾಲೆಯಾಗಿ ರೂಪಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ವಿವಿಧ ಸ್ಪರ್ಧಿಗಳಲ್ಲೂ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ. ಈ ಶಾಲೆಯ ಒಬ್ಬ ವಿದ್ಯಾರ್ಥಿನಿ ಟೆಲಿಸ್ಕೋಪ್ ತರಬೇತಿಯಲ್ಲಿ ವಿಶ್ವ ದಾಖಲೆ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಕೋವಿಡ್ ಸಂಧರ್ಭದಲ್ಲಿ ಮನೆ ಮನೆಗೆ ತೆರಳಿ ಶಿಕ್ಷಕರಿಗೆ ಮೆಡಿಕಲ್ ಕಿಟ್ ವಿತರಿಸಿದ್ದಾರೆ. ಹಗಲು ರಾತ್ರಿ ಎನ್ನದೆ ಕೋವಿಡ್ ಸಮಯದಲ್ಲಿ ವೈದ್ಯರ ತಂಡದೊಂದಿಗೆ ಸೇವೆ ಸಲ್ಲಿಸಿದ್ದಾರೆ. ಬಾಲ್ಯ ವಿವಾಹ ಸಾಮಾಜಿಕ ಪಿಡುಗುಗಳ ವಿರುದ್ದ ದ್ವನಿಯಾಗಿ ಹೋರಾಟ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗಾಗಿ ಉಚಿತ ಕಂಪ್ಯೂಟರ್ ಶಿಕ್ಷಣ ವೃತ್ತಿಪರ ತರಬೇತಿಗಳನ್ನು ಕಲ್ಪಿಸಿ ಅವರನ್ನು ಸ್ವಾವಲಂಬಿಗಳಾಗಿಸುವಲ್ಲಿ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿ ಕಲ್ಯಾಣ ನಿಧಿ ಸ್ಥಾಪಿಸಿ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ನೀಡುತ್ತಿದ್ದಾರೆ ಹೆಣ್ಣು ಮಕ್ಕಳಿಗಾಗಿ ಓಬವ್ವ ಪಡೆ ಸ್ಥಾಪಿಸಿ ನೊಂದವರ ಧ್ವನಿಯಾಗಿ ಸಮಸ್ಯೆಯನ್ನು ಪರಿಹರಿಸುವಲ್ಲಿ ದಿಟ್ಟಪಾತ್ರವಹಿಸಿದ್ದಾರೆ.
ರಾಜ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಮಹಿಳಾ ನೌಕರರ ಮಾಸಿಕ ಮುಟ್ಟಿನ ರಜೆ ಪಡೆಯುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯಾಧ್ಯಕ್ಷರಾದ ಷಡಕ್ಷರಿ ಸರ್ ಅವರ ಮನವೊಲಿಸುವಲ್ಲಿ ಆದೇಶ ಮಾಡಿಸುವಲ್ಲಿ ಸಫಲರಾಗಿದ್ದಾರೆ.
ಕಲಾವಿಭಾಗದ ವಿದ್ಯಾರ್ಥಿಯಾಗಿದ್ದರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷರಾಗಿ ವೈಜ್ಞಾನಿಕ ಮನೋಭಾವನೆ ಮೂಡಿಸುತ್ತಿದ್ದಾರೆ. ಇವರು ರಾಜ್ಯಶಾಸ್ತ್ರದ ಪದವಿಯಲ್ಲಿ ಪಿಎಚ್ ಡಿ ಪಡೆದು ಡಾಕ್ಟರೇಟ್ ಪಡೆದು ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆದರ್ಶ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇವರಿಗೆ ಸಾವಿತ್ರಿಬಾಯಿ ಪುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಡಲಾಗುತ್ತಿದೆ ಎಂದು ಗುರು ಚೈತನ್ಯ ಉಪಾಧ್ಯಾಯರ ಪ್ರಗತಿಪರ ಸಂಘಂ ಸಮಿತಿಯಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದೆ.
ಇದನ್ನೂ ಓದಿ/ಪ್ರವಾಸಕ್ಕೆ ಬಂದಿದ್ದ ತಮಿಳುನಾಡು ಮೂಲದ ವ್ಯಕ್ತಿ ಗೋಕರ್ಣ ಕಡಲತೀರದಲ್ಲಿ ಕುಸಿದು ಬಿದ್ದು ಸಾವು


