ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ವೇಪ್ಸ್ ವಶಪಡಿಸಿಕೊಂಡು, ಅರೋಪಿಯನ್ನ ಬಂಧಿಸಿರುವ ಘಟನೆ ನಡೆದಿದೆ.
ಭಟ್ಕಳ ಶಹರದ ಹೂವಿನ ಚೌಕ್ ಸಮೀಪದ ದುಬೈ ಮಾರ್ಕೆಟ್ನಲ್ಲಿರುವ ಅಂಗಡಿಯೊಂದರಲ್ಲಿ ಜನವರಿ 01 ರಂದು ರಾತ್ರಿ ದಾಳಿ ನಡೆಸಿದ ಪೊಲೀಸರು, ಒಟ್ಟು 1,38,500 ರೂಪಾಯಿ ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಪರವಾನಿಗೆ ಅಥವಾ ಅನುಮತಿ ಇಲ್ಲದೇ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಾಪಾರಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ ಎಂದು ಗುರುತಿಸಲಾಗಿದ್ದು, ತಂದೆ ಸಿದ್ದಿಕ್ ಖಾದಿರ ಮೀರಾ. ಬಂಧಿತನು ಭಟ್ಕಳದ ಕಾರಗದ್ದೆ 2ನೇ ಕ್ರಾಸ್ನ ನಿವಾಸಿಯಾಗಿದ್ದು, ವೃತ್ತಿಯಿಂದ ವ್ಯಾಪಾರಿಯಾಗಿದ್ದಾನೆ. ಆರೋಪಿತನ ಅಂಗಡಿಯಲ್ಲಿ 76,000 ರೂ. ಮೌಲ್ಯದ ಒಟ್ಟು 38 ಎಲೆಕ್ಟ್ರಾನಿಕ್ ಸಿಗರೇಟ್ಗಳು ಹಾಗೂ 62,500 ರೂ. ಮೌಲ್ಯದ ಎಲೆಕ್ಟ್ರಾನಿಕ್ ಸಿಗರೇಟ್ಗೆ ಬಳಸುವ ನಿಕೋಟಿನ್ ಲಿಕ್ವಿಡ್ ರಿಫಿಲ್ಗಳು (ವೇಪ್ಸ್) 125 ಸಂಖ್ಯೆಯಲ್ಲಿ ಪತ್ತೆಯಾಗಿವೆ. ಇವುಗಳನ್ನು ಮಾರಾಟ ಮಾಡಲು ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 01/2026 ಕಲಂ 7 ಹಾಗೂ 8ರ ಅಡಿಯಲ್ಲಿ Prohibition of Electronic Cigarettes (Production, Manufacture, Import, Export, Transport, Sale, Distribution, Storage and Advertisement) Act–2019ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆ ಪೊಲೀಸ್ ಉಪಾಧೀಕ್ಷಕರು ಮಹೇಶ್ ಎಂ.ಕೆ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ ನಾಯ್ಕ ಹಾಗೂ ಸಿಬ್ಬಂದಿಗಳಾದ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ,ಸುರೇಶ್ ಮರಾಠಿ, ಜಗದೀಶ ನಾಯ್ಕ ಹಾಗೂ ರೇವಣಸಿದ್ದಪ್ಪ ಮಾಗಿ ಅವರು ಪಾಲ್ಗೊಂಡಿದ್ದರು.
ಇದನ್ನೂ ಓದಿ/ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಡಾ ಬಿ ಟಿ ಲೋಲಾಕ್ಷಮ್ಮ ಆಯ್ಕೆ


