ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಹಸಿವಿನಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಜಾರಿಗೆ ತಂದಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬೆಳೆ ಲಭ್ಯವಿಲ್ಲದೆ ಸಮಸ್ಯೆ ಉಂಟಾಗಿದ್ದು, ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿಗಳಿಗೆ ಸಪ್ಪೆ ಊಟ ನೀಡುವಂತಹ ಪರಿಸ್ಥಿತಿ ಸರಕಾರಿ ಶಾಲೆಗಳಲ್ಲಿ ಎದುರಾಗಿದೆ.
ಸರ್ಕಾರ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತದೆ. ಆದರೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಬೆಳೆ ಖಾಲಿಯಾಗಿರುವುದರಿಂದ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಪ್ರತಿದಿನವೂ ಶಾಲಾ ವಿದ್ಯಾರ್ಥಿಗಳು ಸಪ್ಪೆ ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಹಾಗೂ SDMC ಸದಸ್ಯರು ತಮ್ಮ ಖರ್ಚಿನಲ್ಲಿ ಬೆಳೆ ಒದಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನೂ ಕೆಲ ಶಾಲೆಗಳಲ್ಲಿ ಬಿಸಿಯೂಟದ ಬದಲಿಗೆ ಪಲಾವು ಸೇರಿದಂತೆ ಬೇರೆ ಬೇರೆ ಅಹಾರವನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆನ್ನಲಾಗಿದೆ. ಇದನ್ನು ಕೆಲ ವಿದ್ಯಾರ್ಥಿಗಳು ಸರಿಯಾಗಿ ಸೇವಿಸದೆ ಖಾಲಿ ಹೊಟ್ಟೆಯಲ್ಲಿಯೇ ಇರುವ ಪರಿಸ್ಥಿತಿಯೂ ಎದುರಾಗುತ್ತಿದೆ.
ದೂರದ ಗ್ರಾಮಗಳಿಂದ ಮುಂಜಾನೆಯೇ ಶಾಲೆಗೆ ಬರಬೇಕಾಗಿರುವ ಮಕ್ಕಳಿಗೆ ಮನೆಯಲ್ಲಿ ಸರಿಯಾಗಿ ತಿಂಡಿ ಮಾಡುವ ಅವಕಾಶವಿಲ್ಲ. ಹೀಗಾಗಿ ಶಾಲೆಯಲ್ಲಿ ಕೂಡ ಸರಿಯಾದ ಊಟ ಸಿಗದೇ, ದಿನಪೂರ್ತಿ ಹಸಿವಿನಿಂದ ದಿನ ಕಳೆಯುವ ಸ್ಥಿತಿ ಎದುರಾಗಿದೆ. ಬಿಸಿಯೂಟ ತಯಾರಕರಿಗೂ ಪ್ರತಿದಿನ ಅಡುಗೆ ಮಾಡುವುದು ತಲೆಬಿಸಿಯಾದ ಕೆಲಸವಾಗಿದೆ.
ಇನ್ನೂ ಕೆಲ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಇರುವ ಬೆಳೆಗಳನ್ನು ಅಕ್ಕ+ಪಕ್ಕದ ಶಾಲೆಗಳಿಂದ ಪಡೆದು ಅಡುಗೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ತಕ್ಷಣವೇ ಶಾಲೆಗಳಿಗೆ ಗುಣಮಟ್ಟದ ಬೆಳೆಗಳನ್ನು ಪೂರೈಸುವ ಅಗತ್ಯತೆ ತುರ್ತಾಗಿ ಎದುರಾಗಿದೆ.


