ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಳೆಗಾಲ ಮುಗಿಯುವ ಹೊತ್ತಿಗೆ ತೆನೆಯೊಡೆದು ಬರುವ ಹೊಸ ಫಲವನ್ನು ಮನೆಗೆ ತರುವ ಕ್ಷಣವನ್ನು ಹೊಸ್ತಿನ ಹಬ್ಬವಾಗಿ ಬರ್ಗಿಯಲ್ಲ ವಿಭಿನ್ನವಾಗಿ ಆಚರಿಸಲಾಯಿತು.
ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಹೊಲಗಳಲ್ಲಿ ಫಸಲೊಡೆದ ಫಲವನ್ನು ಮನೆ ತುಂಬಿಸಿಕೊಳ್ಳುವ ಪೂರ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ವಾದ್ಯ ಮೇಳದೊಂದಿಗೆ ಜನರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಇದರಲ್ಲಿ ಊರಿನ ಎಲ್ಲ ಸಮುದಾಯದವರು ಒಟ್ಟಾಗಿ ಪಾಲ್ಗೊಂಡು ಹಬ್ಬ ಆಚರಣೆ ಮಾಡುವುದು ವಿಶೇಷ.
ಬರ್ಗಿಯಲ್ಲಿ ಹೊಸ್ತಿನ ಹಬ್ಬದ ವೇಳೆ ಗ್ರಾಮ ದೇವತೆಗಳಾದ ಘಟಬೀರ,ಯಜಮಾನ ದೇವರ ಕಳಸವು ನೂರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತರಲಾಗುತ್ತದೆ. ದೇವಸ್ಥಾನದಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಿದ ಬಳಿಕ ಎರಡು ಕಳಸಗಳನ್ನು ಯಜಮಾನ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಇಡಲಾಗುತ್ತದೆ. ನಂತರ ಘಟಬೀರ, ಯಜಮಾನ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಭಕ್ತರು ಸೇರಿ ಹೊಸ್ತಿನ ಹಬ್ಬಕ್ಕೆ ಅಂತ ಮೀಸಲಾಗಿಟ್ಟಿರುವ ಗದ್ದೆಗೆ ತೆರಳಿ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಗತ್ತೆ. ಪೂಜೆಯ ನಂತರ ಕೊಯ್ದ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರತ್ತಾರೆ. ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ರೈತರ ಕೃಷಿ ಉಪಕರಣಗಳಿಗೆ ಕದರು ಕಟ್ಟಲಾಗತ್ತೆ.ಈ ಮೂಲಕ ಮುಂದಿನ ಹಬ್ಬ ಹರಿದಿನಗಳಿಗೆ ಹೊಸ್ತಿನ ಹಬ್ಬ ನಾದಿಯಾಗಿದೆ…