ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಲೋಕಸಭಾ ಚುನಾವಣೆ 2024 ಸಂಬಂಧಿಸಿದಂತೆ ಚುನಾವಣೆಯ ದಿನ ಅಂದರೆ ಕಳೆದ ವರ್ಷ ಮೇ ತಿಂಗಳ 7ರಂದು ಕಾರವಾರ ವಿಧಾನಸಭಾ ಕ್ಷೇತ್ರದ ಸೇಂಟ್ ಮೈಕಲ್ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 107 ರಲ್ಲಿ ಮಾಧ್ಯಮದ ವರದಿಗಾರರು ಮತಗಟ್ಟೆ 107 ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಮತದಾನದ ಗೌಪ್ಯತೆಗೆ ತೊಂದರೆ ನೀಡಿದ ಆರೋಪದ ಮೇಲೆ ಕಾರವಾರದ ಟಿವಿ ಮೀಡಿಯಾದ ಹಾಗೂ ಕೆಲ ಪತ್ರಿಕಾ ಮಾಧ್ಯಮದ ಪತ್ರಕರ್ತರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶ ಮಾಡಿದ್ದಾರೆ.

ಮತಗಟ್ಟೆ ಇರುವ ಸೆಂಟ್ ಮೈಕಲ್ ಶಾಲೆಗೆ ಬಂದು ಮತಯಂತ್ರದ ತಾಂತ್ರಿಕ ದೋಷವನ್ನು ಪರಿಶೀಲನೆ ಮಾಡುವಾಗ ಮಾಧ್ಯಮದ ವರದಿಗಾರರು ಮತಗಟ್ಟೆ 107ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಚುನಾವಣಾ ನಿಯಮ 1961ರ ಕಲಂ 49 (ಎಂ) ನ್ನು ಉಲ್ಲಂಘಿಸುವ ಮೂಲಕ ಮತಗಟ್ಟೆಯ ಒಳಗಡೆ ಕಾಪಾಡಿಕೊಳ್ಳುವ ಹಾಗೂ ಮತಗಟ್ಟೆಯ ನಿಯಮಗಳನ್ನು.ಅನುಸರಿಸುವ ಕಾನೂನನ್ನು ಉಲ್ಲಂಘಿಸಿರುತ್ತಾರೆ.

ಈ ಬಗ್ಗೆ ಮತಗಟ್ಟೆಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ರವರು ಈ ವರದಿಗಾರರ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕಾರ ದೂರು ಸಲ್ಲಿಸಬೇಕೆಂದು ಶುಕ್ರವಾರ ಆದೇಶಿಸಿದ್ದಾರೆ. ಚುನಾವಣೆ ಮುಗಿದ ಒಂದು ವರ್ಷದ ನಂತರ ದೂರನ್ನು ದಾಖಲಿಸಲು ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರನ್ನು ತಕ್ಷಣ ದಾಖಲಿಸದೆ ಚುನಾವಣೆ ಪ್ರಕ್ರಿಯೆ ಮುಗಿದ ಒಂದು ವರ್ಷದ ನಂತರ ದೂರು ದಾಖಲಿಸಲು ಹೊರಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಮಾಧ್ಯಮದವರ ವಿರುದ್ಧ ಈ ರೀತಿ ಪದೇಪದೇ ದೂರು ದಾಖಲಿಸುವ ಸಂಪ್ರದಾಯ ಆರಂಭವಾಗಿದ್ದು ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಸರ್ಕಾರ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಮಾಧ್ಯಮದಿಂದ ಕೇಳಿಬಂದಿದೆ..

ಇದನ್ನೂ ಓದಿ