ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ :ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರು ಅಥವಾ ಉಡುಪಿಗೆ ಸ್ಥಳಾಂತರ ಮಾಡಬೇಕೆಂಬ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಸಾಧುವಾದ ಕ್ರಮವಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಗಂಡುಕಲೆಯಾಗಿರುವ ಯಕ್ಷಗಾನದ ಕಲಾವಿದರು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ವಾದದ ಹಿನ್ನೆಲೆಯಲ್ಲಿ ಕೆಲವರಿಂದ ಈ ಪ್ರಯತ್ನ ನಡೆಯುತ್ತಿದ್ದು, ಹಾಗೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಯಕ್ಷಗಾನದ ಮೂಲ ಪರಂಪರೆಯ ನೆಲವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ವಾಸರೆ ಒತ್ತಾಯಿಸಿದ್ದಾರೆ.

ಈಗಾಗಲೇ ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ನಿಗಮ ಮಂಡಳಿಗಳ ಕಚೇರಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಕಾಡೆಮಿ ಅಥವಾ ಪ್ರಾಧಿಕಾರಗಳ ಕಚೇರಿ ಇರುವುದಿಲ್ಲ. ಉತ್ತರಕನ್ನಡ ಇದು ಯಕ್ಷಗಾನದ ತವರು ನೆಲ. ಹಾಗಾಗಿ ಯಕ್ಷಗಾನ ಅಕಾಡೆಮಿಯ ಕಚೇರಿಯನ್ನು ಒಂದೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಉತ್ತರ ಕನ್ನಡ ಜಿಲ್ಲೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ವಾಸರೆ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿತ್ತು. ಅಧ್ಯಕ್ಷರು ಹಾಗೂ 9ಕ್ಕೂ ಹೆಚ್ಚಿನ ಸದಸ್ಯರು ದಕ್ಷಿಣ ಕನ್ನಡದವರೇ ಆಗಿದ್ದರು. ಆಗಲೇ ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದೆ ಎಂದಿರುವ ಬಿ.ಎನ್. ವಾಸರೆಯವರು ಈಗ ಮತ್ತೆ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾಪದ ಮೂಲಕ ಉತ್ತರ ಕನ್ನಡ ಜಿಲ್ಲೆಯನ್ನು ಯಕ್ಷಗಾನ ಅಕಾಡೆಮಿಯಿಂದ ಅಂತರ ಕಾದುಕೊಳ್ಳುವಂತೆ ಮಾಡುವುದು ಕಂಡು ಬರುತ್ತಿದೆ ಎಂದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ ನಟಿ ಉಮಾಶ್ರೀ ಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಕಲಾವಿದರಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಹಾಗೂ ಅಂದಿನ ಅಧ್ಯಕ್ಷ ಎಮ್.ಎ. ಹೆಗಡೆ ಹಾಗು ಸದಸ್ಯರು ವಿರೋಧಿಸಿದ ಹಿನ್ನೆಲೆಯಲ್ಲಿ ಆ ಪ್ರಸ್ತಾವವನ್ನ ಕೈ ಬಿಡಲಾಗಿತ್ತು. ಇದಾದ ನಂತರದಲ್ಲಿ ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು ಕೂಡ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿದ್ದರು. ಆಗಲು ಸಹ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸ್ಥಳಾಂತರದ ವಿಷಯ ಸ್ಥಗಿತಗೊಂಡಿತ್ತು. ಈಗ ಮತ್ತೆ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ವಿಷಯವನ್ನು ತೆರೆಯ ಮರೆಯಲ್ಲಿ ಹರಿಯ ಬಿಡಲಾಗಿದೆ. ಇದಕ್ಕೆ ಯಕ್ಷಗಾನ ಅಕಾಡಮಿಯ ಅಧ್ಯಕ್ಷರೂ ಹಾಗೂ ಸದಸ್ಯರೆಲ್ಲರೂ ಮಂಗಳೂರಿನವರೇ ಆಗಿರುವುದು ಪ್ರಸ್ತಾವಕ್ಕೆ ಮಹತ್ವ ಬರುವಂತಾಗಿದೆ.

ಯಕ್ಷಗಾನ ಇದು ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುವ ಕಲೆಯಾಗಿದ್ದರೂ ಕೂಡ ಮಂಗಳೂರು ಉಡುಪಿ ಉತ್ತರ ಕನ್ನಡದ ಜೊತೆಗೆ ಶಿವಮೊಗ್ಗ ಸೇರಿದಂತೆ ಹಲವು ಕಡೆಯಯಲ್ಲಿಯೂ ಕೂಡ ಯಕ್ಷಗಾನವಿದೆ. ಯಕ್ಷಗಾನದಲ್ಲಿ ಮೂಡಲಪಾಯ, ಬಡಗುತ್ತಿಟ್ಟು, ತೆಂಕುತಿಟ್ಟು, ಬಡಾಬಡಗುತಿಟ್ಟು, ತಾಳಮದ್ದಳೆ ಸೇರಿದಂತೆ ಹಲವು ಪ್ರಕಾರಗಳಿವೆ. ಇವೆಲ್ಲವು ಕೂಡ ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ಬರುತ್ತವೆ. ಮೂಡಲಪಾಯ ಯಕ್ಷಗಾನ ಪ್ರಕಾರವು ತುಮಕೂರು, ರಾಮನಗರ , ಮೈಸೂರು’ ಕೋಲಾರ, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಇನ್ನು ಕೆಲವು ಜಿಲ್ಲೆಗಳಲ್ಲಿವೆ . ಹಾಗಾಗಿ ಬೆಂಗಳೂರು ಇದು ರಾಜ್ಯದ ರಾಜಧಾನಿಯಾಗಿರುವುದರಿಂದ ಇಂದು ದೇಶವಿದೇಶವನ್ನು ವ್ಯಾಪಿಸಿರುವ ಯಕ್ಷಗಾನ ಹಾಗೂ ಯಕ್ಷಗಾನ ಕಲಾವಿದರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜಧಾನಿಯಲ್ಲೇ ಯಕ್ಷಗಾನ ಅಕಾಡೆಮಿ ಕೇಂದ್ರ ಕಚೇರಿ ಇರುವುದು ಸೂಕ್ತವಾಗಿದೆ.

ಯಾವುದೋ ಒಂದು ಪ್ರಾದೇಶಿಕವಾದ ಸ್ವಾರ್ಥದ ಕಾರಣಕ್ಕೆ, ಅಥವಾ ರಾಜಕೀಯ ಕಾರಣಕ್ಕೆ ಯಕ್ಷಗಾನ ಅಕಾಡೆಮಿಯನ್ನು ಒಂದು ಪ್ರದೇಶಕ್ಕೆ ಸೀಮಿತವಾಗಿಸದೇನೇ ಅದನ್ನು ವಿಶ್ವ ವ್ಯಾಪಿಯಾಗಿ ಕಾಣುವ ವಿಶಾಲ ಗುಣವನ್ನು ನಾವೆಲ್ಲರೂ ಹೊಂದಿರಬೇಕಾಗಿದೆ. ಈಗಾಗಲೇ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನ ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿಸಿ, ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಇನ್ನು ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯ ಸ್ಥಳಾಂತರಕ್ಕೆ ಮುಂದಾದರೆ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ಕಲಾವಿದರೂ ಸೇರಿದಂತೆ ಎಲ್ಲ ಸಾಂಸ್ಕೃತಿಕ ಮನಸ್ಸುಗಳನ್ನು ಕೂಡಿಕೊಂಡುದು ಒಂದು ಸಾಂಸ್ಕೃತಿಕ ರೂಪದ ಚಳುವಳಿಗಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.

ಇದನ್ನೂ ಓದಿ