ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ನಾವು ಕಂಡ ಕನಸು ನನಸಾಗುವ ಜೊತೆಗೆ ಗುರಿ ಮುಟ್ಟಬೇಕಾದರೇ ಎಲ್ಲರೂ ಆರೋಗ್ಯವಂತರಾಗಿರಬೇಕು.ಈ ಕಾರಣಕ್ಕಾಗಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಬಲ್ಲವು ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.

ಅವರು ಇಲ್ಲಿನ ಆಧಾರ್ ಸಂಸ್ಥೆ ಆಶ್ರಯದಲ್ಲಿ, ಮಂಗಳೂರಿನ ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಪಟ್ಟಣದ ಎಂ ಹೆಚ್ ಪಿ ಎಸ್ ಬಾಲಿಕೊಪ್ಪದಲ್ಲಿ ಭಾನುವಾರ ನಡೆದ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ಆಹಾರ ಪದ್ಧತಿ ಜೀವನಶೈಲಿಯಿಂದ ಕಡಿಮೆ ವಯಸ್ಸಿನಲ್ಲಿಯೇ ಹೃದಯ ಸಂಬಂಧಿತ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ ಇದು ನಿಜಕ್ಕೂ ಬೇಸರದ ಸಂಗತಿ. ನಾವು ಆರೋಗ್ಯವಂತರಾಗಿದ್ದರೂ ಸಹ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕಾದ ಪರಿಸ್ಥಿತಿ ಇದ್ದು, ಎಲ್ಲರೂ ಈ ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಧಾರ್ ಸಂಸ್ಥೆ ಅಧ್ಯಕ್ಷ ನಾಗರಾಜ್ ನಾಯ್ಕ ಮಾಳ್ಕೋಡ್ ಮಾತನಾಡಿ, ಆಧಾರ್ ಸಂಸ್ಥೆ ಕಳೆದ 15 ವರ್ಷಗಳಿಂದ ಈ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸ್ವಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಿದ್ದು, ಕಳೆದ 12 ವರ್ಷಗಳ ಹಿಂದೆ ಒಮೇಗಾ ಆಸ್ಪತ್ರೆ ಸಹಯೋಗದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಆಶ್ರಯದಲ್ಲಿ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಮತ್ತೊಮ್ಮೆ ನಮಗೆ ಈ ಅವಕಾಶ ಒದಗಿಬಂದಿದೆ. ಮುಂದಿನ ದಿನಗಳಲ್ಲಿ ಶಿರಸಿಯಲ್ಲಿಯೂ ಸಹ ಬೃಹತ್ ಆರೋಗ್ಯ ಶಿಬಿರವನ್ನು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಆಲೋಚನೆಯಿದೆ ಎಂದು ಅವರು ಹೇಳಿದರು

ಗೌರವ ಉಪಸ್ಥಿತರಿದ್ದ ಹಿರಿಯ ಹೃದ್ರೋಗ ತಜ್ಞ ಕೆ. ಮುಕುಂದ ಮಾತನಾಡಿ, ಪ್ರಸ್ತುತ ದೇಶದಲ್ಲಿ ಹೃದಯಘಾತದ ಪ್ರಕರಣಗಳು ಸಾಕಷ್ಟು ಹೆಚ್ಚಾಗುತ್ತಿದ್ದು ಹೃದಯಾಘಾತ ಸಂಭವಿಸಿದರೆ ಪ್ರಾಥಮಿಕವಾಗಿ ನೀಡುವ ಔಷಧಿಗಳ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇರುವ ಬಗ್ಗೆ ತಿಳಿಸಿದ ಅವರು ಈ ವೇಳೆ ಹೃದಯಾಘಾತ ಸಂಭವಿಸಲು ಕಾರಣಗಳು ಅದಕ್ಕಿರುವ ಮುಂಜಾಗ್ರತ ಪರೀಕ್ಷೆಗಳು ಹಾಗೂ ಮಂಗಳೂರು ಒಮೇಗಾ ಆಸ್ಪತ್ರೆಯಲ್ಲಿ ಇದಕ್ಕಿರುವ ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಮ್ ಆರ್ ಕುಲಕರ್ಣಿ, ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಅಮಿತ್ ಕಿರಣ್, ಡಾ. ಅಭಿಜಿತ್ ಪಾಟೀಲ್, ಪ. ಪಂ. ಸದಸ್ಯ ನಂದನ್ ಬೋರಕರ್, ಆಧಾರ್ ಸಂಸ್ಥೆ ಉಪಾಧ್ಯಕ್ಷ ಬೈಜು ಜೋಸೆಫ್, ಶಿಬಿರದ ಸಂಯೋಜಕ ಧರ್ಮ ಅಂಬಿಗ, ಮಂಗಳೂರು ಒಮೇಗಾ ಆಸ್ಪತ್ರೆ ಎಚ್ ಆರ್ ನಾಗರಾಜ್ ಟಿ. ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಪಿ ಆರ್ ಓ ಬಾಲಕೃಷ್ಣ ಮುಟ್ಟಂ ಹಾಜರಿದ್ದರು.

ಕಾರ್ಯಕ್ರಮವನ್ನು ಆಧಾರ್ ಸಂಸ್ಥೆ ಸಂಯೋಜಕ ಸುರೇಶ್ ಮಡಿವಾಳ ಕಡಕೇರಿ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ ನಾಯ್ಕ ಸ್ವಾಗತಿಸಿದರು. ದಿ. ಡಿ ಎನ್ ಶೇಟ್ ಕುಟುಂಬಸ್ಥ ಪ್ರಶಾಂತ್ ಶೇಟ್ ವಂದಿಸಿದರು.ಕು.ಸಾಯಿ ಸ್ಫೂರ್ತಿ ಹಾಗೂ ಪ್ರಾಚಿ ಶೇಟ್ ಪ್ರಾರ್ಥಿಸಿದರು.

ಇದನ್ನೂ ಓದಿ