ಸುದ್ದಿಬಿಂದು ಬ್ಯೂರೋ ವರದಿ( Suddi Bindu digital news)

ಮಂಗಳೂರು: ಪ್ರಸಾದ್ ಅತ್ತಾವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಾಗಿದೆ. ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ವಿರುದ್ಧ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟ್ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಶಕ್ತಿ ತುಂಬಲು ಪ್ರಾಣಿ ರಕ್ತ ಬಲಿ ನೀಡುವ ವಾಮಾಚಾರ ನಡೆಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಇದೆ.

ಜನವರಿ 23 ರಂದು ಮಂಗಳೂರಿನ ಬಿಜೈಯಲ್ಲಿರುವ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ನಡೆದ ದಾಳಿಯಲ್ಲಿ, ಪ್ರಸಾದ್ ಅತ್ತಾವರ ಮತ್ತು ಇತರ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರ ಬಳಿ ಇದ್ದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಮೊಬೈಲ್‌ಗಳ ಪರಿಶೀಲನೆಯನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಫರೆನ್ಸಿಕ್ ಲ್ಯಾಬ್‌ನಲ್ಲಿ ನಡೆಸಿದಾಗ ಅನುಮಾನಾಸ್ಪದ ಮಾಹಿತಿಗಳು ಪತ್ತೆಯಾದವು.

ವಾಮಾಚಾರದ ಮೂಲಕ ಶಕ್ತಿ ನೀಡಲಾಗಿದೇಯೆ..?

ಪೊಲೀಸರ ತನಿಖೆಯ ಪ್ರಕಾರ, ಪ್ರಸಾದ್ ಅತ್ತಾವರ ವಾಮಾಚಾರದ ಮೂಲಕ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಅತಿಮಾನುಷ ಶಕ್ತಿ ಒದಗಿಸಲು ಪ್ರಯತ್ನಿಸಿದ್ದಾರೆ ಎಂಬ ಸಾಕ್ಷ್ಯಗಳು ಲಭ್ಯವಾಗಿವೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಯುವಾಗ, ಅವರ ಮೊಬೈಲ್‌ನಿಂದ ಹಲವು ಅನುಮಾನಾಸ್ಪದ ಮಾಹಿತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮೊಬೈಲ್ ಪರಿಶೀಲನೆ ವೇಳೆ ಪ್ರಾಣಿ ಬಲಿ ನೀಡುವ ಹಲವು ವಿಡಿಯೋಗಳು ಪತ್ತೆಯಾಗಿದೆ, ಇದರಲ್ಲಿ ರಕ್ತವನ್ನು ದೇವತೆಗಳಿಗೆ ಅರ್ಪಿಸುವ ದೃಶ್ಯಗಳು ಇದ್ದವು. ಅಲ್ಲದೆ, ಪ್ರಸಾದ್ ಅತ್ತಾವರ, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಮತ್ತು ಸುಮ ಆಚಾರ್ಯ ಅವರ ಹೆಸರುಗಳನ್ನು ನಮೂದಿಸಿರುವ ಚೀಟಿ ಸಿಕ್ಕಿದ್ದು, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ದೇವರ ಕತ್ತಿಗೆ ಹಾರವಾಗಿ ಹಾಕಿರುವ ದೃಶ್ಯಗಳು ದಾಖಲಾಗಿವೆ. ಇದಲ್ಲದೆ, ಇನ್ನೊಂದು ವಿಡಿಯೋದಲ್ಲಿ ಅವರ ಹೆಸರು ಮತ್ತು ಫೋಟೋಗಳ ಮೇಲೆ ರಕ್ತ ಅಭಿಷೇಕ ಮಾಡುವ ದೃಶ್ಯಗಳು ಪತ್ತೆಯಾಗಿದೆ.

ಅನಂತ್ ಭಟ್‌ಗೆ ಹಣ ವರ್ಗಾವಣೆ
ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ಅವರ ನಡುವೆ ವಾಮಾಚಾರ ಕುರಿತು ನಡೆದ ವಾಯ್ಸ್ ಚಾಟ್ ಸಂದೇಶಗಳು ಮತ್ತು ಫೋಟೋಗಳು ಪತ್ತೆಯಾಗಿದೆ. ಅನಂತ್ ಭಟ್ ಹಲವು ವಾಮಾಚಾರ ಸಂಬಂಧಿತ ವಿಡಿಯೋಗಳು ಮತ್ತು ಫೋಟೋಗಳನ್ನು ಪ್ರಸಾದ್ ಅತ್ತಾವರಗೆ ಕಳುಹಿಸಿದ್ದಾನೆ. ಇದಕ್ಕೆ ಪ್ರತಿಯಾಗಿ, ಪ್ರಸಾದ್ ಅತ್ತಾವರ ಅನಂತ್ ಭಟ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿಯೂ ದೊರಕಿದೆ.

ಅನುಮಾನಾಸ್ಪದ ಹಣ ವರ್ಗಾವಣೆ
ಡಿಸೆಂಬರ್ 7ರಂದು ಹಣ ತುಂಬಿದ ಚೀಲದ ಫೋಟೋವನ್ನು ಸೂಮಾ ಆಚಾರ್ಯ ಅವರಿಗೆ ಕಳುಹಿಸಲಾಗಿದೆ. ಡಿಸೆಂಬರ್ 8 ರಂದು ಪ್ರಶಾಂತ್ ಬಂಗೇರ, ಹರ್ಷ ಮೈಸೂರು, ಮತ್ತು ಅನಂತ್ ಭಟ್ ಅವರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ, ಡಿಸೆಂಬರ್ 9 ರಂದು ಹರ್ಷ, ಶ್ರೀನಿಧಿ, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಸಭೆಯ ಫೋಟೋ ಮತ್ತು ವಿಡಿಯೋವನ್ನು ಹರ್ಷ ಅವರು ಪ್ರಸಾದ್ ಅತ್ತಾವರಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಗುಂಪಿನ ನಡುವೆ ಹಲವು ಬಾರಿ ವಾಟ್ಸ್ಆಪ್ ಕರೆಗಳು ನಡೆದಿರುವುದೂ ಪತ್ತೆಯಾಗಿದೆ.

ಈ ಘಟನೆಗಳ ಹಿನ್ನೆಲೆಯಲ್ಲಿ, ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಅವರ ನಿರ್ದೇಶನದಂತೆ, ಕದ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೋಮಶೇಖರ್, ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ