ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಇಲ್ಲಿನ ಶಾಸಕರ ಮನೆಯಿಂದ ಮಹಿಳೆಯೊಬ್ಬಳು 80ಸಾವಿರ ರೂಪಾಯಿ ಕದ್ದಿದ್ದಾಳೆ ಎಂಬ ಸುದ್ದಿ ಜಿಲ್ಲೆಯಷ್ಟೆ ಅಲ್ಲದೇ ರಾಜ್ಯಾದ್ಯಂತ ಹರಡಿದ್ದು, “ಸುದ್ದಿಬಿಂದು” ಸಹಿತ ಜಿಲ್ಲೆಯ ಬಹುತೇಕ ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು.
ಆದರೆ ಇದೀಗ ಕುಮಟಾ ಶಾಸಕರ ಬೆಂಬಲಿಗರು ಎನ್ನಲಾದ ಕೆಲವರು ಪೊಲೀಸ್ ಠಾಣೆಗೆ ತೆರಳಿ ಕೆಲ ಮಾಧ್ಯಮ ಸ್ನೇಹಿತರ ವಿರುದ್ಧ ದೂರು ನೀಡಿ ಉತ್ತರ ಕುಮಾರನ ಪೌರುಷ ಮೆರೆದಿದ್ದಾರೆ. ಮಾಧ್ಯಮದವರಿಗೆ ಅಂಕುಶ ಬೇಕಂತೆ! ಎನ್ನುವುದು ಇವರ ಆಗ್ರಹಗಳಲ್ಲೊಂದು. ಬಹುಶಃ ಠಾಣೆಗೆ ಹೋದವರ್ಯಾರು “ವಿಶ್ವ ಶ್ರೇಷ್ಠ ಭಾರತದ ಸಂವಿಧಾನ” ಓದಿಲ್ಲ ಅನ್ನಿಸುತ್ತದೆ. ಪತ್ರಕರ್ತರು ತಮಗೆ ತಾವೇ ಅಂಕುಶ ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಾರೆ. ಮಾಧ್ಯಮವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂತಲೂ ಕರೆಯುತ್ತಾರೆ. ಇದು ಜನತಾ ನ್ಯಾಯಾಲಯ ಎಂದು ಹೇಳುವವರೂ ಇದ್ದಾರೆ. ಕಾರ್ಯಾಂಗ, ಶಾಸಕಾಂಗದಲ್ಲಿ ನ್ಯಾಯ ಸಿಗದಿದ್ದಾಗ ಜನ ಸಹಜವಾಗೇ ಮಾಧ್ಯಮಗಳ ಮೊರೆ ಹೋಗುತ್ತಾರೆ. ಮಾಧ್ಯಮಗಳಲ್ಲಿ ವರದಿ ಆದ ನಂತರ ಎಷ್ಟೋ ಘಟನೆಗಳಿಗೆ ಪರಿಹಾರ ಸಿಕ್ಕಿದ ಉದಾಹರಣೆಗಳಿವೆ. ಆದರೆ ಕುಮಟಾ ಕಾರ್ಯಕರ್ತರಿಗೆ ಏರಿದ ಏಣಿ ತಳ್ಳುವ ಚಟವಲ್ಲದೇ ಮತ್ತೇನೂ ಅಲ್ಲ.
ಸಿಸಿ ಟಿವಿ ಸಹಿತ ಸಕಲ ವ್ಯವಸ್ಥೆಗಳಿರುವ ಶಾಸಕರ ಮನೆಯಲ್ಲಿಯೇ ಕಳ್ಳತನವಾದರೆ ಸಾಮಾನ್ಯ ಜನರ ಪಾಡೇನು? ಈ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇದನ್ನು ಸುದ್ದಿ ಮಾಡುವುದರಲ್ಲಿ ತಪ್ಪೇನಿದೆ? ಎಲ್ಲ ಮಾಧ್ಯಮಗಳು ಒಂದೇ ತರ ಸುದ್ದಿ ಮಾಡಬೇಕೆಂದಿಲ್ಲ. ಒಂದೇ ತರ ಸುದ್ದಿ ಬರೆಯಲು ಇದೇನು ಡಿಟಿಪಿ ಸೆಂಟರ್''ಗಳಲ್ಲ. ಎಲ್ಲ ಮಾಧ್ಯಮಗಳಿಗೂ, ಪತ್ರಕರ್ತರಿಗೂ, ವರದಿಗಾರರಿಗೂ ಅವರದೇ ಆದ ನ್ಯೂಸ್ ಸೋರ್ಸ್ಗಳಿರುತ್ತವೆ. ಪೊಲೀಸ್ ಎಫ್.ಐ.ಆರ್. ಕಾಪಿಯಲ್ಲಿ ಇದ್ದಷ್ಟೇ ಬರೆಯಬೇಕು ಎನ್ನುವುದಿಲ್ಲ. ಪತ್ರಕರ್ತನ ಸೋರ್ಸ್ ಬೇರೆಯೇ ಮಾಹಿತಿ ನೀಡಿರಬಹುದು. ಈ ಬಗ್ಗೆ
ಬಾಂಬೆ ಹೈಕೋರ್ಟ್” ನೀಡಿದ ಆದೇಶ ಕೂಡ ಇದೆ.
ಅಷ್ಟಕ್ಕೂ ಈ ದೇಶದಲ್ಲಿ ಐಟಿ ಸೆಲ್ ಕಾನ್ಸೆಪ್ಟ್, ಟೂಲ್ ಕಿಟ್ ಇವೆಲ್ಲ ತಂದಿದ್ದೇ ಬಿಜೆಪಿ. ಚುನಾವಣಾ ಸಂದರ್ಭಗಳಲ್ಲಿ ಐಟಿ ಸೆಲ್ ಅವರು ಮಾಡಿಕೊಟ್ಟ ಮಿಮ್ಸ್ ಅನ್ನು ಇದೇ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ರಾಡಿ ಎಬ್ಬಿಸುತ್ತಿದ್ದರು. ಆಗ ಇವರಿಗೆ ಅಂಕುಶ ಬೇಕು ಎನ್ನಿಸಲಿಲ್ಲವೇ? ಭಾರತದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒಬ್ಬ ಮುಸ್ಲಿಂ ಎಂದು ಇದೇ ಬಿಜೆಪಿಯವರು ಮಾಡಿದ ಮಿಮ್ಸ್ ಈಗಲೂ ಬೇರೆ ಬೇರೆ ವಾಟ್ಸಪ್ ಗುಂಪುಗಳಲ್ಲಿ ಹರಿದಾಡುತ್ತದೆ. ಇದಕ್ಕೆ ಅಂಕುಶ ಇದೆಯೇ? ರಾಹುಲ್ ಗಾಂಧಿ ಅವರ ಅಭಿಮಾನಿಗಳು ದೇಶಾದ್ಯಂತ ಇದ್ದಾರೆ. ಅವರೆಲ್ಲ ಒಬ್ಬೊಬ್ಬರಾಗಿ ಕೇಸು ಮಾಡುತ್ತಾ ಕೂತರೆ ಆಡಳಿತ ವ್ಯವಸ್ಥೆಯೇ ತಲೆ ಕೆಳಗಾಗಬಹುದು.
ಮಾಧ್ಯಮಗಳೇನು ಪ್ರಶ್ನಾತೀತವಲ್ಲ. ಮಾಧ್ಯಮಗಳಿಗೂ ಒಂದು ಮಿತಿ ಇದೆ. ಪತ್ರಕರ್ತರು ಆ ಮಿತಿಯಲ್ಲೇ ಕಾರ್ಯ ನಿರ್ವಹಿಸುತ್ತಾರೆ. ಇದು ಶಾಸಕರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವಾದ ಕಾರಣ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಧ್ಯವಾದರೆ ಈ ಬಗ್ಗೆ ಸುಮೋಟೋ ಕೇಸು ದಾಖಲಿಸಿ ಸಮಗ್ರ ತನಿಖೆಯಾಗಬೇಕು. ಆ ಮಹಿಳೆಯ ಹೇಳಿಕೆಗಳನ್ನು ವಿಡಿಯೋ ದಾಖಲಿಸಬೇಕು. ಆಕೆಯ ಫೋನ್ ಕಾಲ್ ಹಿಸ್ಟರಿ ತೆಗೆಸಬೇಕು. ಮಾಧ್ಯಮ ಸಂಸ್ಥೆಗಳು ಆ ಮಹಿಳೆಯನ್ನು ಸ್ಟುಡಿಯೋಗೆ ಕರೆಸಿ ಆಕೆಯ ಇಂಟರ್ ವ್ಯೂ ಮಾಡಬೇಕು. ಆಕೆಗೂ ಅವಕಾಶ ನೀಡಬೇಕು. ಯಾರಿಗೊತ್ತು? ಯಾರ ಮನೆಯ ಒಲೆಯ ಮೇಲೆ ಯಾವ ಪದಾರ್ಥ ಬೇಯುತ್ತಿದೆಯೋ? ಈ ಸುದ್ದಿ ವಿಷಯದಲ್ಲಿ ಈಗಲೂ ಜನಕ್ಕೆ ಬೇರೆ ಬೇರೆ ಅನುಮಾನವಿದೆ. ಜನರು ಅನುಮಾನದಿಂದ ಕೇಳುವ ಪ್ರಶ್ನೆಗಳೇ ಮಾಧ್ಯಮಗಳಲ್ಲಿ ಬರುತ್ತವೆಯೇ ಹೊರತು ಸ್ವಯಂ ಸೃಷ್ಟಿ ಯಾವುದೂ ಇಲ್ಲ.
ನಾವೆಲ್ಲ ಒಂದು
ನಾವೆಲ್ಲ ಪತ್ರಕರ್ತರು ಒಂದೇ ಕುಟುಂಬದವರು. ಇಲ್ಲಿ
ಇವನಾರವ ಇವನಾರವ” ಎನ್ನುವ ಪ್ರಶ್ನೆಯೇ ಇಲ್ಲ. ಶಾಸಕರ ಅಭಿಮಾನಿಗಳು ದಾಖಲಿಸುವ ಕೇಸಿನಿಂದಾದರೂ ಮತ್ತಷ್ಟು ಸತ್ಯ ಹೊರಬರಲಿ. ಜನಕ್ಕೆ ಒಳಿತಾಗಲಿ.
ಗಮನಿಸಿ