ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತೊಂದಿದೆ. ಹಾಗೆ ಉತ್ತರ ಕನ್ನಡ ಜಿಲ್ಲೆಯ ಸಾಣಿಕಟ್ಟಾ ಉಪ್ಪು ದೇಶದಲ್ಲಿ ಉತ್ತಮ ಗುಣಮಟ್ಟದ ಉಪ್ಪು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಂತಹ ನೈಸರ್ಗಿಕ ಉಪ್ಪು ಉತ್ಪಾದನಾ ಘಟಕಕ್ಕೆ ಇದೀಗ ಹೊಟೇಲ್ ಉದ್ಯಮಿ ವಿಷಪೂರಿತ ನೀರನ್ನು ಹರಿಬಿಡುತ್ತಿರುವುದು ಜನರ ನಿದ್ದೆಗೆಡಿಸುವಂತೆ ಮಾಡಿದೆ.
ಸಾಣಿಕಟ್ಟಾದಲ್ಲಿರುವ ಉಪ್ಪು ತಯಾರಿಕಾ ಘಟಕ ರಾಜ್ಯದ ಅತ್ಯಂತ ಹಳೆಯ ಉಪ್ಪು ಉತ್ಪಾದನಾ ಘಟಕವಾಗಿದೆ.1720 ರಿಂದ ಆರಂಭಗೊಂಡು ಸುಮಾರು 300 ವರ್ಷಗಳಿಂದ ಉಪ್ಪಿನ ತಯಾರಿಕೆ ಮುಂದುವರೆಸಿದೆ. ಆದರೆ ಧೀರ್ಘ ಇತಿಹಾಸ ಹೊಂದಿರುವ ನಿತ್ಯವೂ ಲಕ್ಷಾಂತರ ಜನರ ದೇಹ ಸೇರುವ ಈ ಉಪ್ಪು ತಯಾರಿಸಲಾಗುವ ಭೂಮಿಗೆ ಗೋಕರ್ಣದ ಭಾಗದ ಹೊಟೇಲ್ ಒಂದರ ಮಲಿನ ನೀರು ಸೇರಿಕೊಳ್ಳುತ್ತಿರುವುದು ಸಾಕ್ಷಿ ಸಮೇತ ಬಯಲಾಗಿದೆ.
ನಿನ್ನೆ ತಡರಾತ್ರಿ ಗೋದಾವರಿ(ಗೋವಾ ಮೂಲದ ವ್ಯಕ್ತಿಯೊಬ್ಬರು ನಡೆಸುತ್ತಿರುವ) ಹೊಟೇಲ್ ಕಲ್ಮಶ ನೀರು ತುಂಬಿಕೊಂಡು ಬಂದ ಟ್ಯಾಂಕರ್ ಚಾಲಕ ಹಾಗೂ ಅಲ್ಲಿನ ಸಿಬ್ಬಂದಿ ಸೇರಿಕೊಂಡು ಹೋಟಲ್ ಕಲ್ಮಶ ನೀರು ತುಂಬಿದ ಟ್ಯಾಂಕರ್ ಒಂದನ್ನು ಸಾಣಿಕಟ್ಟಾದ ಉಪ್ಪು ತಯಾರಿಕಾ ಘಟಕದ (ಗಜನಿ ಪ್ರದೇಶ) ಬಳಿ ಟ್ಯಾಂಕರ್ ನಿಲ್ಲಿಸಿ ಅದರೆ ನೀರನ್ನು ರಾಜಾರೋಷವಾಗಿ ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮುತ್ತಿಗೆ ಹಾಕಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಆ ವೇಳೆ ಈ ನೀರು ಗೋಕರ್ಣ ಭಾಗದಿಂದ ತುಂಬಿಕೊಂಡು ಬಂದಿರುವುದಾಗಿ ಆ ಟ್ಯಾಂಕರ್ ಚಾಲಕ ಹಾಗೂ ಕ್ಲಿನರ್ ಬಾಯ್ ಬಿಟ್ಟಿದ್ದಾರೆ. ಮೊದಲ ಬಾರಿ ಜನರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆದರೆ ಈ ಹಿಂದೆ ಅದೆಷ್ಟು ದಿನದಿಂದ ಕಲ್ಮಶ ನೀರನ್ನು ಈ ಉಪ್ಪಿನ ಘಟಕದಲ್ಲಿ ಹರಿಬಿಟ್ಟಿರಬಹುದು ಎನ್ನುವುದನ್ನು ಉಹಿಸಿಕೊಳ್ಳಲು ಸಾಧ್ಯವಿಲ್ಲ.
ಕೇವಲ ಈ ಒಂದು ಹೊಟೇಲಿನಿಂದ ಮಾತ್ರ ಕಲ್ಮಶ ನೀರನ್ನು ಇಲ್ಲಿಗೆ ತಂದು ಬಿಡಲಾಗುತ್ತಿದೆಯೇ ಅಥವಾ ಗೋಕರ್ಣ ಸುತ್ತಮುತ್ತ ಇರುವ ಎಲ್ಲಾ ಹೊಟೇಲ್ ನೀರನ್ನು ಇದೆ ಘಟಕದಲ್ಲಿ ಹರಿಬಿಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಆದರೆ ಈಗ ಸಾಕ್ಷಿ ಸಹಿತವಾಗಿ ಸಿಕ್ಕಿಬಿದ್ದಿರುವ ಹೊಟೇಲ್ ಮಾಲಿಕರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹ. ಇದು ಹೀಗೇ ಮುಂದುವರಿದರೆ ಮುಂದಿನ ದಿನದಲ್ಲಿ ಸಾಣಿಕಟ್ಟಾ ಉಪ್ಪು ವಿಷಕಾರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.
ಗಮನಿಸಿ
- ಅನಂತಕುಮಾರ ಹೆಗಡೆ ಸೇರಿ ನಾಲ್ವರ ವಿರುದ್ಧ FIR : ಸಿಂಗಾಪುರ ಹಾರಿದ ಹೆಗಡೆ..!
- ಇಂದು ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ರಜೆ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
- ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ
.