ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಮಿರ್ಜಾನಿನಲ್ಲಿ ಇತ್ತಿಚೇಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತನಾದ ಆರೋಪಿ ಓರ್ವ ಜಾಮೀನು ಮೇಲೆ ಹೊರ ಬಂದ ಬಳಿಕ ಪೊಲೀಸರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದಾನೆ.

ಕಳೆದ ವಾರ ಮಿರ್ಜಾನ್ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೋಡ್ಕಣಿ ನಿವಾಸಿ ಶರತ ನಾಯ್ಕನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತನಾದ ಆರೋಪಿ ಎರಡೇ ದಿನದಲ್ಲಿ ಜಾಮೀನಿನ ಮೇಲೆ ಹೊರ ಬಂದು ಸಾಮಾಜಿಕ ಜಾಲತಾಣದಲ್ಲಿ ಕುಮಟಾ ಪೊಲೀಸರು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಅಪಪ್ರಚಾರ ಮಾಡಿದ್ದ. ಗಾಂಜಾ ಮಾರಾಟ ಮಾಡುವವರ ಬಳಿ ಹಣ ಪಡೆದು ಸುಮ್ಮನಿರುವ ಪೊಲೀಸರು ನನಗೂ 50,000 ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎಂದು ಪೊಲೀಸರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ,

ಇದನ್ನು ಗಮನಿಸಿದ ಪೊಲೀಸರು ಮತ್ತೆ ಆತನನ್ನು ಬಂಧಿಸಿ, ಪೊಲೀಸ್ ಸ್ಟೈಲ್‌ನಲ್ಲೇ ವಿಚಾರಿಸಿದ ಬಳಿಕ ಮತ್ತೆ ಅದೇ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆಯ ಬಳಿ ಕ್ಷಮೆ ಕೇಳುವ ಮೂಲಕ ಆ ಆಪಾದನೆಯ ವಿವಾದಕ್ಕೆ ತೆರೆ ಎಳೆದಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಐ ಯೋಗೇಶ ಮತ್ತು ಪಿಎಸ್‌ಐ ಮಂಜುನಾಥ, “ಗಾಂಜಾ ಮಾರಾಟಗಾರರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕೇಸ್ ಹಾಕಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ.

ಕೇಸ್ ಹಾಕಿದ್ದಕ್ಕೆ ಆರೋಪಿಗಳು ಪೊಲೀಸರ ವಿರುದ್ಧ ಅಪಪ್ರಚಾರ ಮಾಡುವುದು ಸಾಮಾನ್ಯ, ಗಾಂಜಾ ಸೇರಿದಂತೆ ಇನ್ನಿತರೆ ಯಾವುದೇ ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಮಾಡುವವರ ಮಾಹಿತಿ ಇದ್ದರೆ, ಜನರು ನೀಡಬಹುದು. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ‘ ಎಂದಿದ್ದಾರೆ.

ಗಮನಿಸಿ