suddibindu. in
Ankola:ಅಂಕೋಲಾ: ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ತರಾತುರಿಯಲ್ಲಿ ನಿರ್ಮಿಸಿದ್ದ ರಸ್ತೆ ಕಾಮಗಾರಿಯಲ್ಲಿ ಅಧಿಕಾರಿಗಳ ಕಳ್ಳಾಟ ಪತ್ತೆಯಾಗಿದೆ.ಕಾಮಗಾರಿ ಮಾಡುವ ಮೊದಲೇ ಸುಳ್ಳು ವರದಿ ತಯಾರಿಸಿರುವ ದಾಖಲೆ ಲಭ್ಯವಾಗಿದೆ.

ಗ್ರಾಮದಲ್ಲಿ ಶನಿವಾರ ತರಾತುರಿಯಲ್ಲಿ 40ಮೀಟರ್ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ರಸ್ತೆ ಮಾಡುವಾಗಲೇ ಗ್ರಾಮಸ್ಥರು ವಿರೋಧಿಸಿದ್ದರು. ಬಲವಂತವಾಗಿ ರಸ್ತೆ ನಿರ್ಮಿಸಿದ್ದರಿಂದ ಆ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ದೂರು ನೀಡಿದ್ದರು.ಸಿಇಒ ಅವರ ಸೂಚನೆಯಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಭಾನುವಾರ ಸ್ಥಳಕ್ಕೆ ಬಂದು ರಸ್ತೆ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ, ಅದೇ ಅಧಿಕಾರಿಗಳು ಕಾಮಗಾರಿ ನಡೆಯುವ ಮೊದಲೇ ಬಿಲ್ ಪಾವತಿಗೆ ಕ್ರಮ ಕೈಗೊಂಡಿರುವುದನ್ನು ಗ್ರಾಮಸ್ಥರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ:-

ಪಂಚಾಯತ್ ರಾಜ್ ಇಲಾಖೆಯ ಗಾಂಧಿ ಸಾಕ್ಷಿ ಪೋರ್ಟಲ್‌ನಲ್ಲಿ ಗ್ರಾಮೀಣ ಭಾಗದಲ್ಲಿ ಮಾಡುವ ಪ್ರತಿ ಕಾಮಗಾರಿಯ ವಿವರ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು.ಅಲ್ಲಿನ ಮಾಹಿತಿ ಪ್ರಕಾರ ಬಿಳಿಹೊಂಯ್ಗಿ ಗ್ರಾಮದಲ್ಲಿ 40 ಮೀಟರ್ ರಸ್ತೆ (ಕಾಮಗಾರಿ ಐಡಿ 34ಎ/2023-24/10309/692835) ಕಾಮಗಾರಿಯನ್ನು ಬಹಳ ದಿನಗಳ ಹಿಂದೆಯೇ ನಡೆಸಲಾಗಿದೆ ಎಂಬ ಮಾಹಿತಿ ಅಳವಡಿಸಲಾಗಿದೆ. ಆದರೆ, ಆ ಮಾಹಿತಿಗೂ ಜಿಪಿಎಸ್ ಫೋಟೊಗೆ ತಾಳೆಯೇ ಇಲ್ಲ.

ಕಾಮಗಾರಿ ಬಿಲ್ ವರದಿಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇಬ್ಬರೂ 2024ರ ಮಾ.11 ರಂದು ರಸ್ತೆ ಕಾಮಗಾರಿಯ ಪರಿಶೀಲನೆ (ಚೆಕ್ ಮೆಸರ್‌ಮೆಂಟ್) ಮಾಡಿದ್ದಾರೆ. ಮಾ.16ಕ್ಕೆ ಕಾಮಗಾರಿ ಬಿಲ್ ವಿವರ ಸಲ್ಲಿಸಲಾಗಿದೆ. ಆದರೆ, ಕಾಮಗಾರಿ ನಡೆಸಿದ್ದೇ ಮಾ.15, 16ರಂದು. ಜಿಪಿಎಸ್ ಫೋಟೊದಲ್ಲಿ ಕೂಡ ರಸ್ತೆ ಕಾಮಗಾರಿ ಆರಂಭಿಸಿದ ದಿನಾಂಕ 15-3-2024 ಎಂದಿದೆ. ಅದೂ ಅರ್ಧ ಕಾಮಗಾರಿಯ ಜಿಪಿಎಸ್ ಫೋಟೊ ಅಪ್ಲೋಡ್ ಮಾಡಿದ್ದಾರೆ.

ಕಾಂಕ್ರೀಟ್ ರಸ್ತೆ ಮಾಡುವಾಗ ರಸ್ತೆ ಮಿರ್ನಿಸಿದ ಬಳಿಕ 21 ದಿನ ನೀರು ಹಾಕಿ ಕ್ಯೂರಿಂಗ್ ಮಾಡಬೇಕು.ರಸ್ತೆ ಅಂಚಿಗೆ ಮಣ್ಣು ತುಂಬಬೇಕು.ಅದರ ನಂತರ ಎಂಜಿನಿಯರ್ ಚೆಕ್ ಮೆಸರ್‌ಮೆಂಟ್ ಮಾಡಬೇಕು.ಆದರೆ, ಈ ಕಾಮಗಾರಿಯಲ್ಲಿ ಕಾಮಗಾರಿ ನಡೆಸುವ ಮೊದಲೇ ಅಧಿಕಾರಿಗಳು ಸುಳ್ಳು ವರದಿ ತಯಾರಿಸಿರುವುದು ಅವರೇ ದಾಖಲಿಸಿದ ಜಿಪಿಎಸ್ ಫೋಟೊದಲ್ಲಿ ಸ್ಪಷ್ಟವಾಗಿದೆ. ರಸ್ತೆ ನಿರ್ಮಿಸಿ ಎರಡು ದಿನವೂ ಆಗಿಲ್ಲ.ಆಗಲೇ ಬಿಲ್ ಪಾವತಿಸಲು ರೆಡಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗುತ್ತಿಗೆದಾರರ ಅನುಕೂಲಕ್ಕೆ ಕಾಮಗಾರಿ ನಡೆಸುವುದಾದರೆ, ಕಾಯ್ದೆ- ಕಾನೂನುಗಳು ಯಾಕೆ. ಮೊದಲೇ ಹಣ ಕೊಟ್ಟರೆ ಗುಣಮಟ್ಟದ ಕಾಮಗಾರಿ ನಡೆಯಲು ಹೇಗೆ ಸಾಧ್ಯ. ಕಣ್ಣೆದುರಿಗೇ ಕಳಪೆ ಕಾಮಗಾರಿ ನಡೆದಿದ್ದಲ್ಲದೆ,ಅಧಿಕಾರಿಗಳೇ ಅದಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಎನ್ನುವುದು ನಂಬುವುದಕ್ಕೂ ಆಗುತ್ತಿಲ್ಲ.ಇಂಥವರ ಮೇಲೆ ಕಠಿಣ ಕ್ರಮ ಆಗಬೇಕು. ಸರಿಯಾದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.