ಸುದ್ದಿಬಿಂದು ಬ್ಯೂರೋ
ಕುಮಟಾ : ಲೋಕಸಭಾ ಚುನಾವಣಾ ಘೋಷಣೆಗೆ ಕೆಲ‌ ದಿನಗಳು ಮಾತ್ರ ಬಾಕಿ ಇದ್ದು, ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಇನ್ನೂ ಅಭ್ಯರ್ಥಿ ಯಾರೆನ್ನುವುದು ಘೋಷಣೆಯಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸೂರಜ್ ನಾಯ್ಕ ಸೋನಿ ಅವರನ್ನು ಕಣಕ್ಕಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ ಎನ್ನಲಾಗಿದೆ.

ಹೌದು ಸೂರಜ್ ನಾಯ್ಕ ಸೋನಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರು ಜೆಡಿಎಸ್ ಸೇರ್ಪಡೆಗೊಳ್ಳುವ ಮೊದಲು ಬಿಜೆಪಿಗಾಗಿ ಸಾಕಷ್ಟು ಸಂಘಟನೆ ಮಾಡಿದ್ದರು. ಆದರೆ 2018ರಲ್ಲಿ ನಡೆದ ಕೆಲವು ರಾಜಕೀಯ ವಿದ್ಯಮಾನಗಳಿಂದ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಮೂಲಕ ಅಂದು ಮೂರು ಪಕ್ಷಕ್ಕೂ ಮುಟ್ಟಿ ನೋಡಿಕೊಳ್ಳುವಂತಹ ಪೈಪೋಟಿ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ಜನತೆಯ ಕಷ್ಟಕ್ಕೆ ಧ್ವನಿಯಾಗಿ, ಹೆಗಲಾಗಿ ನಿಂತಿದ್ದರು.

ಕೊರೋನಾ ಸಂದರ್ಭದಲ್ಲಿ ಓರ್ವ ಜನಪ್ರತಿನಿಧಿ ಮಾಡಬೇಕಾದ ಕಾರ್ಯವನ್ನು ಮಾಡುವ ಮೂಲಕ ಜನ ಮೆಚ್ಚುಗೆ ಪಡೆದುಕೊಂಡಿದ್ದರು. ಬಳಿಕ ಹೊನ್ನಾವರದಿಂದ ಕುಮಟಾದವರೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೀನುಗಾರರ ಸಮಸ್ಯೆ, ಹಾಲಕ್ಕಿ ಸಮಾಜದ ಪ್ರಮುಖ ಬೇಡಿಕೆಯನ್ನು ಮುಂದಿಟ್ಟು ಬೃಹತ್ ಪಾದಯಾತ್ರೆ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜನರೇ ಅವರ ಹೋರಾಟವನ್ನು ಕೊಂಡಾಡಿದ್ದರು.

ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ ಅವರು ಹತ್ತಿರ 60 ಸಾವಿರ‌ ಮತಗಳನ್ನು ಪಡೆಯುವ ಮೂಲಕ ಕೇವಲ 600 ಅಲ್ಪ‌ಮತಗಳ ಅಂತರದಲ್ಲಿ‌ ಹಿನ್ನಡೆ ಅನುಭವಿಸಿದರು. ಆದರೆ‌ ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಹೊಸಬರನ್ನು ಕಣಕ್ಕೆ ಇಳಿಸಲಾಗುತ್ತದೆ ಎನ್ನುವ ಚರ್ಚೆ ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಾದಲ್ಲಿ ಸೂರಜ್ ನಾಯ್ಕ ಸೋನಿ ಅವರನ್ನು ಕಣಕ್ಕಿಳಿಸಲು ಅವಕಾಶ ನೀಡಬೇಕು ಎನ್ನುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಸೂರಜ್ ನಾಯ್ಕ ಅವರನ್ನು ಕಣಕ್ಕಿಳಿಸಿದರೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ತೀರಾ ಕಡಿಮೆ. ಈ ಹಿಂದೆ ಸೂರಜ್ ನಾಯ್ಕ ಸೋನಿ ಬಿಜೆಪಿಯಿಂದಲೇ ಬಂದಿರುವ ಕಾರಣ ಇದು ಸೂರಜ್ ನಾಯ್ಕ ಅವರಿಗೆ ಲಾಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇನ್ನು ಕಾಂಗ್ರೆಸ್ ನಾಯಕರು ಸಹ ಸೂರಜ್ ನಾಯ್ಕ‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಒಂದು ವೇಳೆ ಬಿಜೆಪಿ -ಜೆಡಿಎಸ್ ಮೈತ್ರಿ ಯಶಸ್ವಿಯಾಗದೆ ಹೋದಲ್ಲಿ ಸೋನಿ ಯಾವ ನಿರ್ಧಾರಕ್ಕೆ ಮುಂದಾಗುತ್ತಾರೆ ಅನ್ನೊದನ್ನು ಈಗಲೇ ಹೇಳಲು ಸಾಧ್ಯವಿಲ್ಲ.